ಎಡಪ್ಪಾಡಿ ಕೆ. ಪಳನಿಸ್ವಾಮಿ
ಕುಂಭಕೋಣಂ (ತಮಿಳುನಾಡು): 2026ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಎಐಎಡಿಎಂಕೆ ತನ್ನ ವಿವಾಹ ಸಹಾಯ ಯೋಜನೆಯಡಿ ನವವಿವಾಹಿತರಿಗೆ ರೇಷ್ಮೆ ಸೀರೆಗಳನ್ನು ನೀಡಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮಂಗಳವಾರ ತಿಳಿಸಿದ್ದಾರೆ.
ರೇಷ್ಮೆ ಉಡುಪುಗಳ ನೇಕಾರರೊಂದಿಗೆ ಸಂವಾದ ನಡೆಸಿದ ಅವರು, ನೇಕಾರರ ಜೀವನೋಪಾಯವನ್ನು ಸುಧಾರಿಸಲು ಪಕ್ಷವು ಯೋಜನೆಗಳನ್ನು ಪರಿಚಯಿಸುತ್ತದೆ ಎಂದು ಹೇಳಿದರು.
‘ರಾಜ್ಯದಲ್ಲಿ ರೇಷ್ಮೆ ಕೈಮಗ್ಗ ನೇಕಾರರನ್ನು ಬೆಂಬಲಿಸಲು ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಪ್ರಾರಂಭಿಸಿದ ವಿವಾಹ ಸಹಾಯ ಯೋಜನೆಯಡಿಯಲ್ಲಿ ನವವಿವಾಹಿತ ವಧುಗಳಿಗೆ ಮಂಗಳಸೂತ್ರಕ್ಕಾಗಿ ಚಿನ್ನ, ಅದರ ಜೊತೆಗೆ ರೇಷ್ಮೆ ಸೀರೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, 'ಬಿಜೆಪಿ, ಎಐಎಡಿಎಂಕೆಯನ್ನು ನುಂಗಲಿದೆ ಎಂಬ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ, ಬಿಜೆಪಿ ಪಳನಿಸ್ವಾಮಿಯನ್ನು ನುಂಗುತ್ತದೆ ಎಂದು ಸ್ಟಾಲಿನ್ ಹೇಳುತ್ತಾರೆ. ನುಂಗಲು ನಾನು ಹುಳುವೇ? ನಿಮ್ಮ ಮಿತ್ರಪಕ್ಷಗಳನ್ನು ನೀವೇ ನುಂಗುತ್ತಿದ್ದೀರಿ’ಎಂದು ಹೇಳಿದ್ದಾರೆ.
ತಂಜಾವೂರಿನಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಡಿಮೆಯಾಗುತ್ತಿದೆ. ಕಮ್ಯುನಿಸ್ಟರು ಕಣ್ಮರೆಯಾಗುತ್ತಿದ್ದಾರೆ. ಮತ್ತೊಂದು ಮಿತ್ರಪಕ್ಷವಾದ ವಿಸಿಕೆ ಡಿಎಂಕೆಗೆ ಅಂಟಿಕೊಂಡಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.