ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಎಐಎಡಿಎಂಕೆಗೆ ಸೀಟು ಹಂಚಿಕೆ ತಲೆನೋವಾಗಿ ಪರಿಣಮಿಸಿದೆ.
ವನ್ನಿಯಾರ್ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10. 5ರಷ್ಟು ಮೀಸಲಾತಿ ಘೋಷಿಸಿರುವ ಆಡಳಿತಾರೂಢ ಎಐಡಿಎಂಕೆ ಆ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿದೆ.ಉತ್ತರ ತಮಿಳುನಾಡಿನಲ್ಲಿ ವನ್ನಿಯಾರ್ ಸಮುದಾಯ ಪ್ರಬಲವಾಗಿದ್ದು ಇವರ ಮತಗಳು ನಿರ್ಣಾಯಕವಾಗಿವೆ.
ಇದನ್ನೂ ಓದಿ:ತಮಿಳುನಾಡು: ಸವಾಲಿನ ಸುಳಿಯಲ್ಲಿ ಎಐಎಡಿಎಂಕೆ
ಎಐಎಡಿಎಂಕೆಯ ಅಂಗ ಪಕ್ಷ ರಾಮದಾಸ್ ಸ್ಥಾಪಿತ ಪಿಎಂಕೆ ಉತ್ತರ ತಮಿಳುನಾಡಿನಲ್ಲಿ ಪ್ರಬಲವಾಗಿದೆ. ಈ ಭಾಗದಲ್ಲಿ ಪಿಎಂಕೆಗೆ 10 ರಿಂದ 15 ಕ್ಷೇತ್ರಗಳನ್ನು ಬಿಟ್ಟುಕೊಡುವ ಲೆಕ್ಕಚ್ಚಾರ ಎಐಎಡಿಎಂಕೆ ಪಕ್ಷದ್ದಾಗಿದೆ. ಆದರೆ ಪಿಎಂಕೆ ಮುಖಂಡ ಜಿ.ಕೆ.ಮಣಿ 25 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ತಮಗೆ 60 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂದು ಬಿಜೆಪಿ ಮನವಿ ಮಾಡಿದೆ. ಈಗಾಗಲೇ ಬಿಜೆಪಿ ಸುಲಭವಾಗಿ ಗೆಲ್ಲಬಹುದಾದಂತಹ 60 ಕ್ಷೇತ್ರಗಳನ್ನು ಗುರುತಿಸಿದೆ ಎಂದು ಬಿಜೆಪಿ ಮುಖಂಡ ಮುರುಗನ್ ಹೇಳಿದ್ದಾರೆ. ಆದರೆ ಎಐಎಡಿಎಂಕೆ ಬಿಜೆಪಿಗೆ 25 ರಿಂದ 30 ಸ್ಥಾನಗಳನ್ನು ನೀಡಲು ಸಿದ್ಧವಿದೆ. ಅಮಿತ್ ಶಾ ಭೇಟಿಯ ಬಳಿಕವೇ ಸ್ಪಷ್ಟ ಚಿತ್ರಣ ತಿಳಿಯಲಿದೆ.
ಬಿಜೆಪಿ, ಪಿಎಂಕೆ ಸೇರಿದಂತೆ ಡಿಎಂಡಿಕೆ, ಟಿಎಂಸಿ ಜತೆಯೂ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದ್ದು ಆ ಪಕ್ಷಗಳಿಗೂ ಕೆಲವು ಸ್ಥಾನಗಳನ್ನು ಬಿಟ್ಟುಕೊಡಬೇಕಿದೆ.
ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಮುಂದೆ ಸವಾಲುಗಳ ಸಾಲೇ ಇದೆ. ಎರಡು ಅವಧಿಯ ಆಡಳಿತವಿರೋಧಿ ಅಲೆಯನ್ನು ಅವರು ಮೆಟ್ಟಿನಿಲ್ಲಬೇಕಿದೆ. ಇತ್ತ ಡಿಎಂಕೆ ಅಧಿಕಾರಕ್ಕೆ ಬರಲೇಬೇಕು ಎಂದು ಶತಪಯತ್ನ ಮಾಡುತ್ತಿದೆ. ಡಿಎಂಕೆಯು ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ, ಐಯುಎಂಎಲ್, ಎಂಎನ್ಎಂಕೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.