ADVERTISEMENT

ಚಕ್ರಕ್ಕೆ ಹಾನಿ: ಕೊಚ್ಚಿಯಲ್ಲಿ ಏರ್‌ ಇಂಡಿಯಾ ಮುಂಜಾಗ್ರತಾ ಲ್ಯಾಂಡಿಂಗ್‌

ಪಿಟಿಐ
Published 18 ಡಿಸೆಂಬರ್ 2025, 15:46 IST
Last Updated 18 ಡಿಸೆಂಬರ್ 2025, 15:46 IST
   

ಕೊಚ್ಚಿ: ವಿಮಾನದ ಚಕ್ರಕ್ಕೆ ಹಾನಿಯಾದ್ದರಿಂದ ಜಿದ್ದಾ–ಕೊಯಿಕ್ಕೋಡ್‌ ನಡುವಿನ ಏರ್ ಇಂಡಿಯಾ ವಿಮಾನವನ್ನು ಗುರುವಾರ ಬೆಳಿಗ್ಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ‘ಮುಂಜಾಗ್ರತಾ ಲ್ಯಾಂಡಿಂಗ್‌’ ಮಾಡಲಾಯಿತು.

‘ವಿಮಾನದಲ್ಲಿ 160 ಪ್ರಯಾಣಿಕರಿದ್ದರು. ಜಿದ್ದಾ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಚಕ್ರಕ್ಕೆ ವಸ್ತುವೊಂದು ಬಡಿದು ಹಾನಿಯಾಯಿತು. ವಿಮಾನವನ್ನು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್‌ ಸುರಕ್ಷಿತವಾಗಿ ಇಳಿಸಿದರು. ಪ್ರಯಾಣಿಕರು ರಸ್ತೆ ಮಾರ್ಗದ ಮೂಲಕ ಕೊಯಿಕ್ಕೋಡ್‌ಗೆ ಪ್ರಯಾಣ ಮುಂದುವರಿಸಿದರು’ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರಸ್‌ ವಕ್ತಾರರು ತಿಳಿಸಿದ್ದಾರೆ. 

‘ವಿಮಾನದ ಚಕ್ರಕ್ಕೆ ಹಾನಿಯಾಗಿದೆಯೇ ಹೊರತು, ಲ್ಯಾಂಡಿಂಗ್‌ ಗೇರ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಇದು ತುರ್ತು ಭೂಸ್ಪರ್ಶ ಅಲ್ಲ, ಮುಂಜಾಗ್ರತಾ ಲ್ಯಾಂಡಿಂಗ್‌. ಕೊಯಿಕ್ಕೋಡ್‌ನಲ್ಲಿ ಟೇಬಲ್‌ ಟಾಪ್‌ ವಿಮಾನ ನಿಲ್ದಾಣ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ, ಮಾರ್ಗ ಬದಲಿಸಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲಾಯಿತು’ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.