ಏರ್ ಇಂಡಿಯಾ ವಿಮಾನ
(ರಾಯಿಟರ್ಸ್ ಚಿತ್ರ)
ವಾರಾಣಸಿ: ಇಂಡೋನೇಷ್ಯಾದ ಬಾಲಿಯಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ವಾರಾಣಸಿಯಲ್ಲಿ ಇಳಿಸಲಾಯಿತು ಎಂದು ಅಧಿಕಾರಿಯೊಬ್ಬರು ಇಂದು (ಬುಧವಾರ) ತಿಳಿಸಿದ್ದಾರೆ.
ಮಂಗಳವಾರದಂದು ಈ ಘಟನೆ ನಡಿದಿದೆ. ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ವಿಮಾನ ಬಳಿಕ ಅದೇ ದಿನ ರಾತ್ರಿ ದೆಹಲಿಗೆ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಮಾನದಲ್ಲಿ 187 ಪ್ರಯಾಣಿಕರು ಸಂಚರಿಸುತ್ತಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ.
ಪ್ರತಿಕೂಲ ಹವಾಮಾನ ಹಾಗೂ ಗೋಚರತೆಯ ಕೊರತೆಯಿಂದಾಗಿ ದೆಹಲಿಯಲ್ಲಿ ಏರ್ ಇಂಡಿಯಾ ಎಐ 2146 ವಿಮಾನವನ್ನು ಇಳಿಸುವುದು ಕಷ್ಟಕರವೆನಿಸಿತ್ತು. ವಿಮಾನದ ಸುರಕ್ಷತೆಯ ದೃಷ್ಟಿಯಿಂದ ಮಾರ್ಗ ಬದಲಾಯಿಸಲಾಯಿತು ಎಂದು ವಾರಾಣಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದ್ದಾರೆ.
ಮಗದೊಂದು ಘಟನೆಯಲ್ಲಿ ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡ ಕಾರಣ ದೆಹಲಿ-ಬಾಲಿ ವಿಮಾನ ರಾಷ್ಟ್ರ ರಾಜಧಾನಿಗೆ ಹಿಂತಿರುಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾ ಎಐ2145 ವಿಮಾನ ಇಂದು ಸುರಕ್ಷಿತವಾಗಿ ದೆಹಲಿಯಲ್ಲಿ ಲ್ಯಾಂಡ್ ಆಯಿತು. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಮಂಗಳವಾರದಂದು ಏರ್ ಇಂಡಿಯಾದ ಏಳು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ರದ್ದುಗೊಳಿಸಲಾಗಿತ್ತು. ಅಹಮದಾಬಾದ್ ವಿಮಾನ ದುರಂತದ ಬಳಿಕ ಈವರೆಗೆ 80ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.