ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಕೋವಿಡ್–19ಗೆ ಬಲಿಯಾಗಿರುವ 5 ಜನರು 1984ರಲ್ಲಿ ಸಂಭವಿಸಿದ್ದ ಅನಿಲ ದುರಂತದ ಸಂತ್ರಸ್ತರು ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೋಪಾಲ್ ಅನಿಲ ದುರಂತದಲ್ಲಿ ಬದುಕುಳಿದವರು ಕೊರೊನಾ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಸಂತ್ರಸ್ತರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲ ಸಂಘ ಸಂಸ್ಥೆಗಳು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿವೆ
1984ರಲ್ಲಿ ಸಂಭವಿಸಿದ್ದ ಅನಿಲ ದುರಂತದಲ್ಲಿ ಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದರು. ಲಕ್ಷಾಂತರ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ದುರಂತದಲ್ಲಿ ಬದುಕುಳಿದವರು ಕ್ಯಾನ್ಸರ್. ಶ್ವಾಸಕೋಶ ಸೋಂಕು, ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಪಲ್ಯ ಬಳಿಂದ ಬಳಲುತ್ತಿದ್ದು ಅವರಿಗಾಗಿಯೇ ಇಲ್ಲಿ ಭೋಪಾಲ್ ಮೆಮೊರಿಯಲ್ ಮತ್ತು ಸಂಶೋಧನಾ ಕೇಂದ್ರವನ್ನು (ಬಿಎಂಎಚ್ಆರ್ಸಿ)ವನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.
ಅನಿಲ ದುರಂತದ ಸಂತ್ರಸ್ತರು ಕೊರೊನಾ ವೈರಸ್ ಸೋಂಕಿಗೆ ತುತ್ತಾದರೆ ಅವರಿಗೆ ಅಪಾಯ ಹೆಚ್ಚಿರುತ್ತದೆ ಎಂದು ಬಿಎಂಎಚ್ಆರ್ಸಿ ವೈದ್ಯರು ಹೇಳಿದ್ದಾರೆ. ಮೃತ 5 ಜನರಲ್ಲಿ 65 ವರ್ಷದ ಹಿರಿಯ ಪತ್ರಕರ್ತರೊಬ್ಬರು ಸೇರಿದ್ದು ಅವರು ಅನಿಲ ದುರಂತದ ಸಂತ್ರಸ್ತರು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಸಂತ್ರಸ್ತರಿಗಾಗಿ ಮೀಸಲಾಗಿದ್ದ ಭೋಪಾಲ್ ಮೆಮೊರಿಯಲ್ ಮತ್ತು ಸಂಶೋಧನಾ ಕೇಂದ್ರವನ್ನು (ಬಿಎಂಎಚ್ಆರ್ಸಿ)ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿತರಿಗಾಗಿ ಮೀಸಲಿರಿಸಲಾಗಿದೆ. ಇದರಿಂದಾಗಿ ಅನಿಲ ದುರಂತದ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ’ ಎಂದು ಭೋಪಾಲ್ ಗ್ರೂಪ್ ಆಫ್ ಇನ್ಫಾರ್ಮೇಷನ್ ಆ್ಯಂಡ್ ಆಕ್ಷನ್ ಸಂಸ್ಥೆಯ ಸದಸ್ಯೆ ರಚನಾ ದಿಂಗ್ರಾ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.