ADVERTISEMENT

ನಾನು ಸೆಲ್ಫಿ ಕ್ಲಿಕ್ಕಿಸಿಲ್ಲ: ಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 9:19 IST
Last Updated 17 ಫೆಬ್ರುವರಿ 2019, 9:19 IST
   

ಕೋಯಿಕ್ಕೋಡ್: ಪುಲ್ವಾಮ ದಾಳಿಯಲ್ಲಿ ಹುತಾತ್ಮ ಯೋಧ ವಸಂತ ಕುಮಾರ್ ಮೃತದೇಹದ ಮುಂದೆ ನಾನು ಸೆಲ್ಫಿ ಕ್ಲಿಕ್ಕಿಸಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮಸಹ ಸಚಿವಅಲ್ಫೋನ್ಸ್ ಕಣ್ಣಂತ್ತಾನಂ ಹೇಳಿದ್ದಾರೆ.ಅದು ಸೆಲ್ಫಿ ಅಲ್ಲ. ಹುತಾತ್ಮ ಯೋಧನಿಗೆ ಶ್ರದ್ದಾಂಜಲಿ ಅರ್ಪಿಸಿ ನಾನು ಮುಂದೆ ಹೋಗುತ್ತಿದ್ದಾಗ ಯಾರೋ ಒಬ್ಬರು ಫೋಟೊ ಕ್ಕಿಕ್ಕಿಸಿದ್ದಾರೆ.

ಅದನ್ನು ಯಾರೋ ಒಬ್ಬರು ತಮ್ಮ ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುತ್ತಿರುವ ಕಚೇರಿಗೆ ಕಳಿಸಿಕೊಟ್ಟಿದ್ದಾರೆ. ಅದು ಸೆಲ್ಫಿ ಅಲ್ಲ ಎಂಬುದು ನೋಡಿದರೆ ತಿಳಿಯುತ್ತದೆ.ಅಷ್ಟೇ ಅಲ್ಲ ನಾನು ಸೆಲ್ಫಿ ಕ್ಲಿಕ್ಕಿಸುವುದಿಲ್ಲ. ಇಲ್ಲಿಯವರೆಗೆ ಸೆಲ್ಫಿ ಕ್ಲಿಕ್ಕಿಸಿಲ್ಲ, ಹುತಾತ್ಮ ಯೋಧನ ನಿವಾಸದಲ್ಲಿ ನಡೆದ ಅಂತ್ಯ ಸಂಸ್ಕಾರವನ್ನು ಕೆಲವು ಮಾಧ್ಯಮಗಳು ಲೈವ್ ಮಾಡಿದ್ದವು. ಅದು ನೋಡಿದರೆ ಗೊತ್ತಾಗುತ್ತದೆ ಎಂದು ಕಣ್ಣಂತ್ತಾನಂ ಫೇಸ್‍ಬುಕ್ ಪೋಸ್ಟ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ADVERTISEMENT


ನನ್ನ ದೇಶಭಕ್ತಿಯನ್ನು ಪ್ರಶ್ನಿಸುವವರಲ್ಲಿ ನಾನು ಹೇಳುವುದಿಷ್ಟೇ. ಕಳೆದ 40 ವರ್ಷಗಳಿಂದ ನಾನು ಸಾರ್ವಜನಿಕ ವಲಯದಲ್ಲಿ ಹಲವಾರು ಜವಾಬ್ದಾರಿಗಳನ್ನು ಹೊತ್ತು ನಿಸ್ವಾರ್ಥಿಯಾಗಿ ದೇಶದ ಅಭಿವೃದ್ಧಿಗಾಗಿ ಜನಸೇವೆ ಮಾಡುತ್ತಿರುವ ವ್ಯಕ್ತಿಯಾಗಿದ್ದೇನೆ. ಅದಕ್ಕಾಗಿ ಜಿಲ್ಲಾಧಿಕಾರಿ ಸ್ಥಾನವೋ ಸಚಿವ ಸ್ಥಾನಬೇಕೆಂದು ನಾನು ಹಠ ಹಿಡಿದಿಲ್ಲ.ನನ್ನ ಅಪ್ಪ ಕೂಡಾ ಯೋಧರಾಗಿದ್ದರು. ಹಾಗಾಗಿ ಭಾರತೀಯ ಯೋಧರ ತ್ಯಾಗ, ಮಹತ್ವ ಏನೆಂಬುದನ್ನು ಬಾಲ್ಯದಿಂದಲೇ ಬಲ್ಲೆ. ಅನಗತ್ಯ ವಿವಾದಗಳನ್ನು ಸೃಷ್ಟಿಸಿ ರಾಜಕೀಯ ಮಾಡದೆ ದೇಶಕ್ಕಾಗಿ ನಿಸ್ವಾರ್ಥ ಸೇವೆಯನ್ನು ಯುವಜನರು ಮಾಡಬೇಕಿದೆ ಎಂದು ಕಣ್ಣಂತ್ತಾನಂ ತಮ್ಮ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.