ಚಂಡಿಗಡ: ಭಾರತ-ಪಾಕಿಸ್ತಾನ ಗಡಿ ಪ್ರದೇಶದ ಫಿರೋಜ್ಪುರ ಜಿಲ್ಲೆಯ ಜಮೀನೊಂದರಲ್ಲಿ ಬಾಂಬ್ ಇದ್ದ ಟಿಫಿನ್ ಬಾಕ್ಸ್ ಪತ್ತೆಯಾಗಿರುವುದನ್ನು ಪಂಜಾಬ್ ಸರ್ಕಾರ ಗಂಭೀರವಾಗಿ ಪರಿಗಣಿಸಬಹುದು ಎಂದು ಭಾವಿಸಿದ್ದೇನೆ. ಬಾಂಬ್ ದಾಳಿ ಬೆದರಿಕೆಯನ್ನು ಅಲ್ಲಗಳೆಯುತ್ತಿರುವ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರವು ಆ ಧೋರಣೆಯಿಂದ ಹೊರಬರಬೇಕು ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಫಿರೋಜ್ಪುರ ಜಿಲ್ಲೆಯ ಅಲಿ ಕೇ ಗ್ರಾಮದ ಜಮೀನೊಂದರಲ್ಲಿ ಬಾಂಬ್ ಇಟ್ಟಿದ್ದ ಟಿಫಿನ್ ಬಾಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಮೂವರು ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್, ‘ಪಂಜಾಬ್ ಸರ್ಕಾರ ಹಾಗೂ ಗೃಹ ಸಚಿವ ಸುಖ್ಜಿಂದರ್ ಸಿಂಗ್ ರಾಂಧಾವ ಅವರು ನಿರಾಕರಣೆಯ ಮನಸ್ಥಿತಿಯಿಂದ ಹೊರಬಂದು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಆಶಯ ಹೊಂದಿದ್ದೇನೆ’ ಉಲ್ಲೇಖಿಸಿದ್ದಾರೆ.
‘ಗಡಿಯಾಚೆಗಿನಿಂದ ಬರುವ ನಿರಂತರ ಬೆದರಿಕೆ ಮತ್ತು ಸವಾಲುಗಳನ್ನು ಎದುರಿಸಲು ವಿಶೇಷ ನಿಗಾ ವಹಿಸುವ ಮತ್ತು ವಿಸ್ತೃತ ಯೋಜನೆ ರೂಪಿಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
ಭದ್ರತೆ ಹಾಗೂ ಸುರಕ್ಷತೆಗೆ ಸಂಬಂಧಿಸಿ ಅಮರಿಂದರ್ ಸಿಂಗ್ ಅವರು ಇತ್ತೀಚೆಗೆ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಇಂಥ ಹೇಳಿಕೆಗಳು ಜನರಲ್ಲಿ ಅನಗತ್ಯ ಭಯ ಮತ್ತು ಅಭದ್ರತೆಯ ಭಾವನೆ ಮೂಡಿಸುತ್ತವೆ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.