ತಿರುವನಂತರಪುರದಲ್ಲಿ ಶನಿವಾರ ನಡೆದ ಪಕ್ಷದ ಬೃಹತ್ ರ್ಯಾಲಿಯಲ್ಲಿ ಕಾರ್ಯಕರ್ತರತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈ ಬೀಸಿದರು. ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಜೊತೆಗಿದ್ದರು
–ಪಿಟಿಐ ಚಿತ್ರ
ತಿರುವನಂತಪುರ: ‘ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಒಕ್ಕೂಟ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟವು ಕೇರಳದಲ್ಲಿ ಆಡಳಿತ ನಡೆಸಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿವೆ. ಅಲ್ಲದೇ, ತುಷ್ಟೀಕರಣ ರಾಜಕೀಯದ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹದ (ಪಿಎಫ್ಐ) ದೇಶ ವಿರೋಧಿ ಸಂಘಟನೆಗಳಿಗೆ ಕೇರಳವನ್ನು ಸುರಕ್ಷಿತ ತಾಣವನ್ನಾಗಿ ಮಾರ್ಪಡಿಸಿದ್ದವು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಇಲ್ಲಿನ ಪುತರಿಕದಂ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ವಾರ್ಡ್ ಹಂತದ ಮುಖಂಡರು ಹಾಗೂ ಕಾರ್ಯಕರ್ತರ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದರಷ್ಟೆ ರಾಜ್ಯದ ಅಭಿವೃದ್ಧಿ ಸಾಧ್ಯವಿದೆ. ದಕ್ಷಿಣ ಭಾರತದ ರಾಜ್ಯಗಳು ಅಭಿವೃದ್ಧಿಯಾಗದಿದ್ದರೆ, ‘ವಿಕಸಿತ ಭಾರತ’ ಸಾಧ್ಯವಿಲ್ಲ. ಹೀಗಾಗಿ, ಈಗಿನಿಂದಲೇ ‘ವಿಕಸಿತ ಕೇರಳ’ವೇ ಬಿಜೆಪಿಯ ಮುಖ್ಯ ಧ್ಯೇಯವಾಗಿದೆ’ ಎಂದು ಅವರು ಒತ್ತಿ ಹೇಳಿದರು.
‘ಪಿಎಫ್ಐ ನಿಷೇಧ ಹೇರುವ ಎಲ್ಲ ಅಧಿಕಾರ ಕೇರಳ ಸರ್ಕಾರಕ್ಕಿತ್ತು. ಆದರೆ, ಕ್ರಮ ಕೈಗೊಳ್ಳಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಂಘಟನೆಯ ಮೇಲೆ ನಿಷೇಧ ಹೇರಿ, ಪ್ರಮುಖ ನಾಯಕರನ್ನು ಬಂಧಿಸಿದ್ದರು’ ಎಂದರು.
ಇದಕ್ಕೂ ಮುನ್ನ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಜಿ.ಮರಾರ್ ಹೆಸರಿನಲ್ಲಿ ನಿರ್ಮಿಸಿದ್ದ ಪಕ್ಷ ರಾಜ್ಯ ಕಚೇರಿ ‘ಮರಾರ್ಜಿ ಭವನ’ವನ್ನು ಅಮಿತ್ ಶಾ ಉದ್ಘಾಟಿಸಿದರು. ಈ ವೇಳೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಹಿರಿಯ ಮುಖಂಡರು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.