ಅಮಿತಾಭ್ ಕಾಂತ್
ನವದೆಹಲಿ: 45 ವರ್ಷಗಳ ಕಾಲ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅಮಿತಾಭ್ ಕಾಂತ್ ಅವರು ‘ಜಿ–20’ ಶೆರ್ಪಾ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
1980ರ ಬ್ಯಾಚ್ನ ಕೇರಳ ಕೇಡರ್ನ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿರುವ ಅಮಿತಾಬ್ ಕಾಂತ್ ಅವರನ್ನು ಭಾರತ ‘ಜಿ–20’ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಕೆಲವೇ ತಿಂಗಳುಗಳ ಮುನ್ನ (2022ರ ಜುಲೈ) ಭಾರತದ ಜಿ–20 ಶೆರ್ಪಾ ಆಗಿ ನೇಮಿಸಲಾಗಿತ್ತು.
‘ನನ್ನ ಹೊಸ ಪ್ರಯಾಣ... 45 ವರ್ಷಗಳ ಸಮರ್ಪಿತ ಸರ್ಕಾರಿ ಸೇವೆಯ ನಂತರ ನಾನು ಹೊಸ ಅವಕಾಶಗಳನ್ನು ಸ್ವೀಕರಿಸಲು ಮತ್ತು ಜೀವನದಲ್ಲಿ ಮುಂದುವರಿಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಜಿ20 ಶೆರ್ಪಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನನ್ನ ರಾಜೀನಾಮೆಯನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ಹಲವಾರು ಅಭಿವೃದ್ಧಿ ಉಪಕ್ರಮಗಳನ್ನು ನಡೆಸಲು ಮತ್ತು ಭಾರತದ ಬೆಳವಣಿಗೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಾರಿಯಾಗಿದ್ದೇನೆ’ ಎಂದು ಅಮಿತಾಬ್ ಕಾಂತ್ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಶೆರ್ಪಾಗಳು ಯಾರು?
ಶೆರ್ಪಾಗಳು ಜಿ20 ಸಭೆಗಳಿಗೆ ತಮ್ಮ ರಾಷ್ಟ್ರ ನಾಯಕರಿಗೆ ಕಾರ್ಯಸೂಚಿಯ ಚೌಕಟ್ಟನ್ನು ತಯಾರು ಮಾಡುತ್ತಾರೆ ಮತ್ತು ಹಲವಾರು ಜಿ20 ಸಭೆಗಳಿಗೆ ಅವರ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಾರೆ.
ಶೆರ್ಪಾಗಳು ಸರ್ಕಾರದ ಮುಖ್ಯಸ್ಥರ ವೈಯಕ್ತಿಕ ಪ್ರತಿನಿಧಿಗಳಾಗಿದ್ದು, ಅವರು ವಾರ್ಷಿಕ ಜಿ7 ಮತ್ತು ಜಿ20 ಶೃಂಗಸಭೆಗಳಂತಹ ಅಂತರರಾಷ್ಟ್ರೀಯ ಶೃಂಗಸಭೆಗಳಿಗೆ ಚೌಕಟ್ಟನ್ನು ಸಿದ್ಧಪಡಿಸುತ್ತಾರೆ. ವಾರ್ಷಿಕ ಶೃಂಗಸಭೆಗಳ ನಡುವೆ ಹಲವು ಶೆರ್ಪಾ ಸಮ್ಮೇಳನಗಳು ನಡೆಯುತ್ತವೆ. ಅಲ್ಲಿ ಸಂಭವನೀಯ ಒಪ್ಪಂದಗಳನ್ನು ರೂಪಿಸಲಾಗುತ್ತದೆ. ಇದು ಅಂತಿಮ ಶೃಂಗಸಭೆಯಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಮಾತುಕತೆಗಳಲ್ಲಿ ಅಗತ್ಯವಿರುವ ಸಮಯ ಮತ್ತು ಸಂಪನ್ಮೂಲಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಶೆರ್ಪಾ ಎಂಬ ಹೆಸರು
ಹಿಮಾಲಯದಲ್ಲಿ ಗೈಡ್ಗಳಾಗಿ ಸೇವೆ ಸಲ್ಲಿಸುತ್ತಿರುವ ನೇಪಾಳಿ ಜನಾಂಗದ ಶೆರ್ಪಾಗಳಿಂದ ಈ ಹೆಸರನ್ನು ಪಡೆಯಲಾಗಿದೆ. ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿಸಲು, ಜಿ20 ಶೆರ್ಪಾಗಳು ರಾಷ್ಟ್ರದ ಮುಖ್ಯಸ್ಥರ ದಾರಿಯನ್ನು ಸುಗಮಗೊಳಿಸುತ್ತಾರೆ ಮತ್ತು ಅವರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಾರೆ ಎಂಬ ಕಾರಣದಿಂದ ಈ ಹೆಸರನ್ನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.