ADVERTISEMENT

ಬಿಹಾರ ಕೇಡರ್ ಐಪಿಎಸ್‌ ಅಧಿಕಾರಿ ಬಂಧಿಸಿದ ಆಂಧ್ರ ಪೊಲೀಸ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 16:14 IST
Last Updated 23 ಫೆಬ್ರುವರಿ 2026, 16:14 IST
   

ಹೈದರಾಬಾದ್: ಬಿಹಾರ ಕೇಡರ್ ಐಪಿಎಸ್‌ ಅಧಿಕಾರಿ ಸುನಿಲ್ ನಾಯಕ್ ಅವರನ್ನು ಆಂಧ್ರ ಪ್ರದೇಶ ಪೊಲೀಸರ ತಂಡ ಬಂಧಿಸಿದೆ. ಪ್ರಸ್ತುತ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಿರುವ ಕೆ.ಆರ್. ರಘುರಾಮ ಕೃಷ್ಣ ರಾಜು ಅವರ ಕಸ್ಟಡಿ ಚಿತ್ರಹಿಂಸೆ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ.

‌ಘಟನೆ 2021ರಲ್ಲಿ ನಡೆದಿದ್ದು, 2024ರ ಜುಲೈನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಹಲವು ಆರೋಪಿಗಳಲ್ಲಿ ಸುನಿಲ್ ಕೂಡಾ ಒಬ್ಬರು. ಘಟನೆ ನಡೆಯುವಾಗ ರಘುರಾಮ ಅವರು ವೈಎಸ್‌ಆರ್‌ಸಿಪಿ ಸಂಸದರಾಗಿದ್ದರು.

ಘಟನೆ ವೇಳೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಘುರಾಮ ಅವರನ್ನು ಬಂಧಿಸಲಾಗಿತ್ತು. ಜಗನ್ ಆದೇಶದ ಮೇರೆಗೆ ಐಪಿಎಸ್‌ ಅಧಿಕಾರಿಗಳು ತಮ್ಮನ್ನು ಬಂಧಿಸಿ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಕೊಲೆಗೆ ಯತ್ನಿಸಿದ್ದರು ಎಂದು ಅವರು ಆರೋಪಿಸಿದ್ದರು.

ADVERTISEMENT

ಆಂಧ್ರ ಪ್ರದೇಶದಲ್ಲಿ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಡಿಐಜಿ ಆಗಿ ಸೇವೆ ಸಲ್ಲಿಸಿದ್ದ ಸುನಿಲ್ ಅವರು, ಆ ವೇಳೆ ಬಿಹಾರ ಕೇಡರ್‌ನಿಂದ ಡೆಪ್ಯುಟೇಶನ್‌ನಲ್ಲಿದ್ದರು. 2024ರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಣೆ ಆದ ನಂತರ ಅವರು ಬಿಹಾರಕ್ಕೆ ಮರಳಿದ್ದರು.

ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಜಗನ್ ಅವರು ಮೂರನೇ ಆರೋಪಿಯಾಗಿದ್ದಾರೆ. ಒಂದು ಮತ್ತು ಎರಡನೇ ಆರೋಪಿಗಳನ್ನಾಗಿ ಸಿಐಡಿಯ ಮಾಜಿ ಮುಖ್ಯಸ್ಥ ಪಿ.ವಿ. ಸುನಿಲ್ ಮತ್ತು ರಾಜ್ಯ ಗುಪ್ತಚರದ ಮಾಜಿ ಮುಖ್ಯಸ್ಥ ಪಿಎಸ್‌ಆರ್ ಆಂಜನೇಯಲು ಅವರನ್ನು ಹೆಸರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.