ADVERTISEMENT

ವಿಧಾನಪರಿಷತ್ತು ರದ್ದು ಮಾಡುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ

ಏಜೆನ್ಸೀಸ್
Published 27 ಜನವರಿ 2020, 7:30 IST
Last Updated 27 ಜನವರಿ 2020, 7:30 IST
ಆಂಧ್ರಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ
ಆಂಧ್ರಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ   

ಆಂಧ್ರಪ್ರದೇಶ:ವಿಧಾನಪರಿಷತ್ತನ್ನೇ ರದ್ದುಪಡಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ ನೇತೃತ್ವದ ಸಚಿವ ಸಂಪುಟ ಸೋಮವಾರ ಕೈಗೊಂಡಿದೆ.

ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ ಏಕಾ ಏಕಿ ಈ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿ ಟಿಡಿಪಿಯ 21 ಮಂದಿ ಶಾಸಕರು ವಿಧಾನಸಭೆಯ ಕಲಾಪ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ರಚಿಸುವ ಜಗನ್ ಮೋಹನರೆಡ್ಡಿ ಅವರ ಯೋಜನೆಗೆ ಆಂಧ್ರವಿಧಾನಪರಿಷತ್ತು ತಡೆಯೊಡ್ಡಿತ್ತು. ಈ ಮಸೂದೆ ಜಾರಿಗೆವಿಧಾನಸಭೆಯಲ್ಲಿ ಅನುಮೋದನೆ ದೊರೆತರೂ ವಿಧಾನಪರಿಷತ್ತಿನಲ್ಲಿ ಅನುಮೋದನೆ ದೊರೆಯದೆ ವಿಳಂಬವಾಗುತ್ತಿತ್ತು. ಅಮರಾವತಿಯಲ್ಲಿಯೇ ರಾಜಧಾನಿ ರಚನೆಯಾಗಬೇಕು ಎಂದು ವಾದಿಸಿದ್ದ ಪ್ರಮುಖ ವಿರೋಧ ಪಕ್ಷವೂ ಆಗಿರುವ ಟಿಡಿಪಿ ಮೂರು ರಾಜಧಾನಿಗಳ ರಚನೆಗೆ ತೀವ್ರ ವಿರೋಧಪಕ್ಷಪಡಿಸಿತ್ತು.

ADVERTISEMENT

ಅಲ್ಲದೆ, ವಿಧಾನಪರಿಷತ್ತಿನಲ್ಲಿ ಟಿಡಿಪಿ ಪಕ್ಷದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಮೂಲಕ ಮೂರು ರಾಜಧಾನಿಗಳ ರಚನೆ ಜಾರಿಯಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು.ಈ ಎಲ್ಲಾ ಬೆಳವಣಿಗೆಗಳ ಮೊದಲ ಹಂತವಾಗಿ ವಿಧಾನಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರವನ್ನು ಜಗನಮೋಹನ ರೆಡ್ಡಿ ತೆಗೆದುಕೊಂಡಿದ್ದಾರೆ.ನಂತರ ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳ ರಚನೆಯ ಮುಂದಿನ ಕ್ರಮಗಳ ಕುರಿತು ಮುಖ್ಯಮಂತ್ರಿ ಚರ್ಚಿಸಿದ್ದಾರೆ.

ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ಇನ್ನು ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯುವುದು ಬಾಕಿ ಇದೆ. ವಿಧಾನಸಭೆಯಲ್ಲಿ ಬಹುಸಂಖ್ಯೆಯ ಶಾಸಕರು ಪರಿಷತ್ತು ರದ್ದುಮಾಡುವ ನಿರ್ಧಾರದ ಪರವಾಗಿ ಮತಚಲಾಯಿಸಿದರೆ, ಪರಿಷತ್ತು ರದ್ದಿಗೆ ಚಾಲನೆ ದೊರೆಯಲಿದೆ. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕರು 151 ಮಂದಿ ಇದ್ದು, ಟಿಡಿಪಿ ಪಕ್ಷದ 23 ಮಂದಿ ಶಾಸಕರಿದ್ದಾರೆ.

ಈ ನಿರ್ಧಾರವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುವುದು. ಅಲ್ಲಿಂದ ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುವುದು. ಕಾನೂನು ಸಚಿವಾಲಯದಲ್ಲಿ ಸಂಬಂಧಿಸಿದಮಸೂದೆಯೊಂದನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಸಂಸತ್ತಿನಲ್ಲಿ ಮಂಡಿಸಲಾಗುವುದು. ಸಂಸತ್ತು ಅನುಮತಿ ನೀಡಿದ ನಂತರ ಪರಿಷತ್ತು ಅಧಿಕೃತವಾಗಿ ರದ್ದಾಗಲಿದೆ. ಇವೆಲ್ಲಾ ಪ್ರಕ್ರಿಯೆಗಳು ಮುಗಿಯಬೇಕಾದರೆ 2 ರಿಂದ 3 ತಿಂಗಳು ಕಾಲಾವಕಾಶ ಬೇಕಾಗಬಹುದು. ಅಲ್ಲಿಯವರೆಗೆ ಆಂಧ್ರದಲ್ಲಿ ಪರಿಷತ್ತು ಚಾಲ್ತಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇವೆಲ್ಲಾ ಬೆಳವಣಿಗೆಗಳಿಂದಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಟಿಡಿಪಿ ಚಂದ್ರಬಾಬು ನಾಯ್ಡು ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.