ADVERTISEMENT

ಆಂಧ್ರ | ಮುಸ್ಲೀಮೇತರ ಬಾಲಕರಿಗೂ ಸುನ್ನತಿ!: CBI ಮಾಜಿ ನಿರ್ದೇಶಕ ನಾಗೇಶ್ವರ ಆರೋಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:42 IST
Last Updated 23 ಡಿಸೆಂಬರ್ 2025, 6:42 IST
<div class="paragraphs"><p>ಎಂ. ನಾಗೇಶ್ವರ ರಾವ್</p></div>

ಎಂ. ನಾಗೇಶ್ವರ ರಾವ್

   

ಪಿಟಿಐ ಚಿತ್ರ

ಹೈದರಾಬಾದ್: ‘ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಬಾಲಕರ ಶಿಶ್ನದ ಮುಂದೊಗಲ ಭಾಗ ಕತ್ತರಿಸುವ ಸುನ್ನತಿಯನ್ನು ವೈದ್ಯಕೀಯ ಪದ್ಧತಿಯ ನೆಪವೊಡ್ಡಿ ಇತರ ಧರ್ಮಕ್ಕೆ ಸೇರಿದ ಬಾಲಕರಿಗೂ ನಡೆಸುವ ಮೂಲಕ ಕೋಮುವಾದ ಕಾರ್ಯಸೂಚಿಯನ್ನು ಸದ್ದಿಲ್ಲದೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಸಿಬಿಐನ ಮಾಜಿ ನಿರ್ದೇಶಕ, ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ಆರೋಪಿಸಿದ್ದಾರೆ.

ADVERTISEMENT

ಈ ಕುರಿತು ರಾಜ್ಯ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸತ್ಯ ಕುಮಾರ್ ಯಾದವ್ ಅವರಿಗೆ ಪತ್ರ ಬರೆದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರ ವೈದ್ಯಕೀಯ ಮತ್ತು ಕಾನೂನು ದೃಷ್ಟಿಕೋನದಿಂದ ಅವಲೋಕಿಸುವ ಭರವಸೆ ನೀಡಿದೆ.

‘ಸುನ್ನತಿಯಿಂದ ಸಾಕಷ್ಟು ವೈದ್ಯಕೀಯ ಲಾಭಗಳಿವೆ ಎಂದು ವೈದ್ಯರೇ ಮುಸ್ಲೇಮೇತರ ಪಾಲಕರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇಂಥ ತಪ್ಪು ಮಾಹಿತಿಯು ವೈದ್ಯಕೀಯ ಶಿಕ್ಷಣ ಅಥವಾ ತರಬೇತಿಯಲ್ಲೇ ಬಿತ್ತಲಾಗಿದೆ. ಇಂಥದ್ದನ್ನು ಉತ್ತೇಜಿಸುತ್ತಿರುವುದರ ಹಿಂದ ಕೋಮುವಾದದ ಒಂದು ಸಂಘಟಿತ ಪ್ರಯತ್ನವೇ ಅಡಗಿದೆ. ಹೀಗಾಗಿ ಇದೊಂದು ವೈದ್ಯಕೀಯ ಪದ್ಧತಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಸುನ್ನತಿಯನ್ನು ‘ಖತ್ನಾ‘ ಎಂದೂ ಕರೆಯಲಾಗುತ್ತದೆ. ಮುಸ್ಲಿಮ್ ಪುರುಷರಿಗೆ ಸಂಬಂಧಿಸಿದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆ ಇದಾಗಿದೆ. ಪ್ರವಾದಿ ಮೊಹಮ್ಮದ್‌ ಮತ್ತು ಅಬ್ರಾಹಂ ಅವರಿಗೆ ಸಂಬಂಧಿಸಿದ ಸುನ್ನಾ ಸಂಪ್ರದಾಯದ ಭಾಗ ಇದಾಗಿದೆ. ಶುದ್ಧತೆ, ನೈರ್ಮಲ್ಯ ಹಾಗೂ ಉಮ್ಮಾಹ್ (ಸಮುದಾಯ) ಪ್ರತೀಕದಂತೆ. ಇದು ಬಾಲ್ಯ ಅಥವಾ ಪ್ರೌಢಾವಸ್ಥೆಯ ಹಂತದಲ್ಲಿ ನಡೆಸಲಾಗುತ್ತಿದೆ. ಹೆಚ್ಚಾಗಿ ವೈದ್ಯಕೀಯ ಸಿಬ್ಬಂದಿಯೇ ಇದನ್ನು ನಡೆಸುತ್ತಾರಾದರೂ, ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರು ಇರುವುದು ಸಾಮಾನ್ಯ. 

ಆಂಧ್ರಪ್ರದೇಶದಲ್ಲಿ ಮುಸ್ಲೀಮೇತರ ಬಾಲಕರಿಗೂ ಸುನ್ನತಿ ನಡೆಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನಾಗೇಶ್ವರ ರಾವ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದಕ್ಕಾಗಿ ಕಳೆದ 10 ವರ್ಷಗಳ ದಾಖಲೆಗಳನ್ನು ಪರಿಶೀಲಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ವೈದ್ಯಕೀಯ ಕೋರ್ಸ್‌ ಅಥವಾ ತರಬೇತಿಯಲ್ಲಿ ಸುನ್ನತಿ ಅಥವಾ ಅದಕ್ಕೆ ಸಂಬಂಧಿಸಿದ ಅಂಶವನ್ನು ಸೇರಿಸಲಾಗಿದೆಯೇ ಎಂದೂ ವೈದ್ಯಕೀಯ ಶಿಕ್ಷಣ ಇಲಾಖೆ ಪರಿಶೀಲಿಸಬೇಕು. ಸುನ್ನತಿ ಕುರಿತು ವೈದ್ಯಕೀಯ ಮತ್ತು ವೈಜ್ಞಾನಿಕ ಜಾಗೃತಿ ಮೂಡಿಸಲು ಮತ್ತು ಸ್ಪಷ್ಟತೆಯನ್ನು ತರಲು ಜಾಗೃತಿ ಅಭಿಯಾನ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ನಾಗೇಶ್ವರ ರಾವ್ ಅವರು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್, ‘ಇಂಥದ್ದೊಂದು ಗಂಭೀರ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿರುವುದಕ್ಕೆ ನಾಗೇಶ್ವರ ರಾವ್‌ ಅವರಿಗೆ ಧನ್ಯವಾದಗಳು. ಸಾಕ್ಷ್ಯಗಳ ಆಧಾರಿತ ವೈದ್ಯಕೀಯ ಪದ್ಧತಿ ಹಾಗೂ ನೈತಿಕ ಗುಣಮಟ್ಟ ಮತ್ತು ಕೋಮು ಸಾಮರಸ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ. ಈ ವಿಷಯವನ್ನು ವೈದ್ಯಕೀಯ ಮಾರ್ಗಸೂಚಿ ಅನ್ವಯ ಸರ್ಕಾರ ಅವಲೋಕಿಸಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.