ಭೋಪಾಲ್: ಲಾಕ್ಡೌನ್ ಸಮಯದಲ್ಲಿ ಉದ್ಯೋಗವಿಲ್ಲದೆ ನೂರಾರು ವಲಸಿಗರು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಹಳ್ಳಿಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ನಾಜಿರಾ ಖಾನ್ ಜೀವದ ಹಂಗು ತೊರೆದು ಅವರನ್ನೆಲ್ಲ ಕ್ವಾರಂಟೈನ್ ಮಾಡಿ ಮತ್ತು ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದರು.
ಇದೊಂದು ಅಪಾಯಕಾರಿ ಕೆಲಸ ಎಂದು ಆಕೆಯ ಕುಟುಂಬ ಕೆಲಸ ಬಿಡುವಂತೆ ಒತ್ತಾಯಿಸಿತ್ತು ಕೂಡ. ಆದರೆ ಇದಕ್ಕೆಲ್ಲ ಬಗ್ಗದೆ ಆಕೆ ಮಾಡಿದ ಸೇವೆಗಾಗಿ ಇದೀಗ ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯು) ಜನವರಿ 31 ರಂದು ನವದೆಹಲಿಯಲ್ಲಿ `ಕೋವಿಡ್ ವುಮನ್ ವಾರಿಯರ್ ' ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.
ಎನ್ಸಿಡಬ್ಲ್ಯು ಸಂಸ್ಥಾಪನಾ ದಿನದಂದು ನಡೆಯುವ ಸಮಾರಂಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ನಾಜಿರಾ ಖಾನ್ ಅವರನ್ನು ಸನ್ಮಾನಿಸಲಿದ್ದಾರೆ ಎಂದು ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ನಾಜಿರಾ ಖಾನ್ ಅವರು ಶಿಯೋಪುರ ಜಿಲ್ಲೆಯ ಹಿರಗಾಂವ್ ನಿವಾಸಿ. ಸ್ಥಳೀಯ ಅಂಗನವಾಡಿಯಲ್ಲಿ (ಸರ್ಕಾರ ನಡೆಸುವ ಮಕ್ಕಳ ಆರೈಕೆ ಕೇಂದ್ರ) ಕೆಲಸ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಲಾಕ್ಡೌನ್ ಹೇರಿಕೆಯಾದಾಗ ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಒಂದು ಸಾವಿರ ಜನರು ಹಳ್ಳಿಗೆ ಹಿಂತಿರುಗಿದ್ದರು. ಇಡೀ ಗ್ರಾಮದ ಸುರಕ್ಷತೆಗಾಗಿ ಅವರನ್ನು ಕ್ವಾರಂಟೈನ್ ಮಾಡುವುದು ಅಗತ್ಯವಾಗಿತ್ತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮದ ಸರಪಂಚರ ಸಹಾಯದೊಂದಿಗೆ ನಗರಗಳಿಂದ ಹಿಂತಿರುಗಿದ ಪ್ರತಿಯೊಬ್ಬರನ್ನು ಕ್ವಾರಂಟೈನ್ ಮಾಡುವುದು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಮತ್ತು ಔಷಧಗಳನ್ನು ಕೊಡಿಸುವ ಜವಾಬ್ದಾರಿಯನ್ನು ನಾಜಿರಾ ಖಾನ್ ನಿರ್ವಹಿಸಿದ್ದರು.
'ಈ ಎಲ್ಲ ಕೆಲಸ ಮಾಡುವಾಗ ಆಕೆಗೂ ಸೋಂಕು ತಗುಲಬಹುದೆಂದು ಹೆದರಿದ ಆಕೆಯ ಕುಟುಂಬಸ್ಥರು ಕೆಲಸ ಬಿಡುವಂತೆ ಒತ್ತಾಯಿಸಿದರು. ಇದೇ ಅವಧಿಯಲ್ಲಿ ನಾಜಿರಾ ಅವರು ಡೆಂಘೀ ರೋಗದಿಂದ ಬಳಲುತ್ತಿದ್ದರು. ಆದರೆ ಆಕೆಯ ಪತಿ ಬೆಂಬಲ ನೀಡಿದರು ಮತ್ತು ಆಕೆ ತನ್ನ ಕೆಲಸವನ್ನು ಬಿಡಲಿಲ್ಲ. ಆಕೆಯ ಪ್ರಯತ್ನದಿಂದಾಗಿ, ಇಂದು ಇಡೀ ಗ್ರಾಮವೇ ಕೊರೊನಾ ವೈರಸ್ನಿಂದ ಮುಕ್ತವಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.