ನವದೆಹಲಿ: ರಫೇಲ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹ ಸಂಸ್ಥೆ ಎನ್ಡಿಟಿವಿಸುದ್ದಿವಾಹಿನಿ ವಿರುದ್ಧ ₹10 ಸಾವಿರ ಕೋಟಿ ಪರಿಹಾರ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದೆ.
ಅಹಮದಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಅಕ್ಟೋಬರ್ 26ರಂದು ವಿಚಾರಣೆ ಆರಂಭವಾಗಲಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಕಳೆದ ಸೆಪ್ಟೆಂಬರ್ 29ರಂದು ಎನ್ಡಿಟಿವಿ ರಫೇಲ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ‘ಟ್ರೂಥ್ವರ್ಸಸ್ ಹೈಫ್‘ ಎಂಬ ಕಾರ್ಯಕ್ರಮವನ್ನು ಪ್ರಕಟಿಸಿತ್ತು. ಇದರಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ರಿಲಯನ್ಸ್ ಕಂಪನಿ ಪ್ರಕರಣ ದಾಖಲಿಸಿದೆ.
ರಿಲಯನ್ಸ್ ಕಂಪನಿ ಮಾಡಿರುವ ಆರೋಪವನ್ನು ಎನ್ಡಿಟಿವಿ ಅಲ್ಲಗಳೆದಿದ್ದು, ನ್ಯಾಯಾಲಯದಲ್ಲಿ ವಾದ ಮಂಡಿಸುವುದಾಗಿ ಪ್ರಕಟಿಸಿದೆ.‘ಟ್ರುಥ್ ವರ್ಸಸ್ ಹೈಫ್‘ ಕಾರ್ಯಕ್ರಮದಲ್ಲಿ ರಫೇಲ್ ರಕ್ಷಣಾ ಒಪ್ಪಂದದ ಬಗ್ಗೆ ರಿಲಯನ್ಸ್ ಸಮೂಹದ ಉನ್ನತ ಅಧಿಕಾರಿಗಳಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನ ಮಾಡಲಾಗಿತ್ತು. ಆದರೆ ಕಂಪನಿ ಅಧಿಕಾರಿಗಳು ನಿರ್ಲಕ್ಷಿಸಿದನ್ನು ಮಾತ್ರಕಾರ್ಯಕ್ರಮದಲ್ಲಿ ಬಿತ್ತರಿಸಲಾಗಿದೆ. ರಿಲಯನ್ಸ್ ಕಂಪೆನಿ ಆಯ್ಕೆಗೆ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂಬ ಡೆಸಾಲ್ಟ್ ಕಂಪೆನಿಯ ಹೇಳಿಕೆಯನ್ನು ಪ್ರಕಟಿಸಲಾಗಿದೆ ಎಮದು ಎನ್ಡಿಟಿವಿ ಹೇಳಿದೆ.
ರಕ್ಷಣಾ ಒಪ್ಪಂದದ ಕುರಿತಂತೆ ಪ್ರಶ್ನೆ ಕೇಳಿ ಉತ್ತರ ಪಡೆಯುವುದು ಸಹ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಎಮಬ ಅಂಶವನ್ನು ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸುವುದಾಗಿ ಎನ್ಡಿಟಿವಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.