ಸದ್ಯ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಜಾಗತಿಕ ಪಿಡುಗು ಕೋವಿಡ್–19 ಸೋಂಕು ಭೀತಿಯಿಂದಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿವೆ. ಆದರೂ ಅದನ್ನು ನಾವು ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಿದ್ದೇವೆ. ಆದರೆ, ಕ್ರೀಡಾ ಸಚಿವ ಕಿರಣ್ ರಿಜುಜು ಹಂಚಿಕೊಂಡಿರುವ ಮಂಗಗಳ ಚಿತ್ರವೊಂದು ನಮ್ಮ ತಪ್ಪಿನ ಅರಿವಾಗುವಂತೆ ಮಾಡುತ್ತಿದೆ.
ಅರುಣಾಚಲ ಪ್ರದೇಶಮತ್ತು ಅಸ್ಸಾಂ ರಾಜ್ಯಗಳ ಗಡಿ ಭಾಗದಲ್ಲಿರುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಕಲ್ಲಂಗಡಿ ಮತ್ತು ಬಾಳೆ ಹಣ್ಣು ನೀಡುತ್ತಿದ್ದಾರೆ. ಈ ವೇಳೆ ಹಣ್ಣು ತಿನ್ನಲು ಮುಗಿಬೀಳದ ಮಂಗಗಳು ಪರಸ್ಪರ ಸಾಕಷ್ಟು ಅಂತರದಲ್ಲಿಯೇ ಉಳಿದಿರುವುದು ಚಿತ್ರದಲ್ಲಿ ಸೆರೆಯಾಗಿದೆ. ಆರುಪ್ ಕಲಿಟಾ ಎನ್ನುವವರು ತೆಗೆದಿರುವ ಈಚಿತ್ರವನ್ನು ಕಿರಣ್ ರಿಜುಜು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಿಜುಜು ಚಿತ್ರದ ಜೊತೆಗೆ, ‘ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಅರುಣಾಚಲ ಪ್ರದೇಶದ ಭಾಲುಕ್ಪಾಂಗ್ಬಳಿ ಕಂಡುಬಂದ ಪರಿಪೂರ್ಣ ಸಾಮಾಜಿಕ ಅಂತರದ ಚಿತ್ರವಿದು. ನಾವು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಮಾನ್ಯ ದೈನಂದಿನ ಜೀವನದಲ್ಲಿ ನಾವು ಪಾಲಿಸದಿರುವ ಅನೇಕ ಪ್ರಮುಖ ಪಾಠಗಳನ್ನು ಈ ಪ್ರಾಣಿಗಳು ನಮಗೆ ಬೋಧಿಸುತ್ತವೆ’ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಸುಮಾರು 1.5 ಸಾವಿರ ಜನರು ಹಂಚಿಕೊಂಡಿದ್ದು, 9 ಸಾವಿರಕ್ಕೂ ಹೆಚ್ಚು ಟ್ವೀಟಿಗರು ಮೆಚ್ಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.