ಅಮರಾವತಿ: ಇತ್ತೀಚೆಗೆ ಬಿಡುಗಡೆಯಾದ ಭಾರತದ ಹೊಸ ನಕ್ಷೆಯಲ್ಲಿ ಆಂಧ್ರಪ್ರದೇಶದ ರಾಜಧಾನಿಯನ್ನು ಹೆಸರಿಸದೇ ಕೈಬಿಡಲಾಗಿದ್ದು, ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಅಮರಾವತಿಯ ಬಗ್ಗೆ ಮುಖ್ಯಮಂತ್ರಿ ಜಗನ್ಮೋಹನ್ ಅವರಿಗೆ ಇರುವ ದ್ವೇಷವೇ ಈ ಬೆಳವಣಿಗೆಗೆ ಕಾರಣ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ತೆಲಂಗಾಣದ ರಾಜಧಾನಿ ಹೈದರಾಬಾದ್ ಅನ್ನು ನಕ್ಷೆಯಲ್ಲಿ ತೋರಿಸಲಾಗಿದೆ.
‘ಅಮರಾವತಿಯು ರಾಜ್ಯದ ರಾಜಧಾನಿ ಎಂದು ಜಗತ್ತಿನಾದ್ಯಂತ ಪ್ರಚಾರ ಮಾಡಿದೆ. ಆದರೆ, ಭ್ರಷ್ಟಾಚಾರದ ಆರೋಪ ಹೊರಿಸಿ ನನ್ನೆಲ್ಲ ಯತ್ನಗಳನ್ನು ಕೊಲ್ಲಲಾಯಿತು. ಹೊಸ ರಾಜಧಾನಿಯನ್ನು ಸೂಚಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ನಕ್ಷೆಯಿಂದ ರಾಜಧಾನಿ ಹೊರಗುಳಿಯುವಂತಾಗಿದೆ’ ಎಂದು ನಾಯ್ಡು ಹೇಳಿದ್ದಾರೆ.
‘ರಾಜಧಾನಿಯನ್ನು ಪುಲಿವೆಂದುಲಕ್ಕೆ ಹಾಗೂ ಹೈಕೋರ್ಟನ್ನು ಕರ್ನೂಲಿಗೆ ವರ್ಗಾಯಿಸುವುದು ಒಳಿತು’ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ವ್ಯಂಗ್ಯಮಾಡಿದ್ದಾರೆ. ರಾಜಧಾನಿಯನ್ನು ಅಮರಾವತಿ ಬಿಟ್ಟು ಬೇರೆಡೆಗೆ ವರ್ಗಾಯಿಸುವ ಸರ್ಕಾರದ ನಡೆಯನ್ನು ಪವನ್ ವಿರೋಧಿಸುತ್ತಾ ಬಂದಿದ್ದಾರೆ. ಪ್ರತಿಪಕ್ಷಗಳ ಟೀಕೆಯನ್ನು ಹಾಸ್ಯಾಸ್ಪದ ಎಂದಿರುವ ಸಚಿವ ಬೋತ್ಸಾ ಸತ್ಯನಾರಾಯಣ ಅವರು ಸದ್ಯದಲ್ಲೇ ರಾಜಧಾನಿ ಹೆಸರು ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.