ADVERTISEMENT

ಉತ್ತರ ಭಾರತೀಯರನ್ನು ಅಪಮಾನಿಸುವ ರಾಜ್ ಠಾಕ್ರೆಗೆ ಅಯೋಧ್ಯೆ ಪ್ರವೇಶವಿಲ್ಲ: ಸಂಸದ

ಪಿಟಿಐ
Published 6 ಮೇ 2022, 1:18 IST
Last Updated 6 ಮೇ 2022, 1:18 IST
ರಾಜ್‌ ಠಾಕ್ರೆ
ರಾಜ್‌ ಠಾಕ್ರೆ    

ಲಖನೌ: ಜೂನ್ 5 ರಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವುದನ್ನು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಗುರುವಾರ ಆಕ್ಷೇಪಿಸಿದ್ದಾರೆ. ಉತ್ತರ ಭಾರತೀಯರನ್ನು ಅವಮಾನಿಸುವ ರಾಜ್‌ ಠಾಕ್ರೆ ಬಹಿರಂಗ ಕ್ಷಮೆಯಾಚಿಸುವವರೆಗೂ ಅಯೋಧ್ಯೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದ ಮತ್ತು ರಾಮಮಂದಿರ ಚಳವಳಿಯ ನಾಯಕರಲ್ಲಿ ಒಬ್ಬರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಕುರಿತು ಟ್ವೀಟ್‌ ಮಾಡಿದ್ದು, ‘ಉತ್ತರ ಭಾರತೀಯರನ್ನು ಅವಮಾನಿಸುವ ರಾಜ್ ಠಾಕ್ರೆ ಅವರನ್ನು ಅಯೋಧ್ಯೆಯ ಗಡಿಯನ್ನು ಪ್ರವೇಶಿಸಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

‘ಅಯೋಧ್ಯೆಗೆ ಬರುವ ಮೊದಲು, ರಾಜ್ ಠಾಕ್ರೆ ಎಲ್ಲಾ ಉತ್ತರ ಭಾರತೀಯರಲ್ಲಿ ಕೈಮುಗಿದು ಕ್ಷಮೆಯಾಚಿಸಬೇಕು. ಆಯೋಧ್ಯೆ ಚಳವಳಿಯಲ್ಲಿ ಠಾಕ್ರೆ ಕುಟುಂಬದ ಕೊಡುಗೆ ಏನೂ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಉತ್ತರ ಭಾರತೀಯರ ಕ್ಷಮೆ ಕೇಳುವವರೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಠಾಕ್ರೆ ಅವರನ್ನು ಭೇಟಿ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಶ್ರೀರಾಮನ ಆಶೀರ್ವಾದ ಪಡೆಯಲು ಜೂನ್ 5 ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಠಾಕ್ರೆ ಅವರು ಏಪ್ರಿಲ್ 17 ರಂದು ಪುಣೆಯಲ್ಲಿ ಘೋಷಿಸಿದ್ದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಯೋಧ್ಯೆ ಚಳವಳಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರ ಕೊಡುಗೆ ಏನು? ಚಳವಳಿಗೆ ಎಷ್ಟು ಮಂದಿ ಕಾರ್ಯಕರ್ತರು ಪ್ರಾಣ ತ್ಯಾಗ ಮಾಡಿದ್ದಾರೆ? ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನ ಕಾರಣದಿಂದಾಗಿ ಆಯೋಧ್ಯೆಯಲ್ಲಿ ರಾಮ ಮಂದಿರನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.