ADVERTISEMENT

‘ದೇಶ ರಕ್ಷಿಸಿದ ಗೋಡ್ಸೆ’ ಎಂದ ಪ್ರೊಫೆಸರ್‌ಗೆ ಡೀನ್‌ ಹುದ್ದೆ: ಕಾಂಗ್ರೆಸ್‌ ಟೀಕೆ

ಪಿಟಿಐ
Published 27 ಫೆಬ್ರುವರಿ 2025, 13:33 IST
Last Updated 27 ಫೆಬ್ರುವರಿ 2025, 13:33 IST
ಜೈರಾಮ್‌ ರಾಮೇಶ್‌ ಅವರು ತಮ್ಮ ಪೋಸ್ಟ್‌ನೊಂದಿಗೆ ಹಂಚಿಕೊಂಡಿರುವ ಚಿತ್ರ
ಜೈರಾಮ್‌ ರಾಮೇಶ್‌ ಅವರು ತಮ್ಮ ಪೋಸ್ಟ್‌ನೊಂದಿಗೆ ಹಂಚಿಕೊಂಡಿರುವ ಚಿತ್ರ   

ನವದೆಹಲಿ: ‘ಮಹಾತ್ಮ ಗಾಂಧಿಯನ್ನು ಹತ್ಯೆಗೈದು ಗೋಡ್ಸೆಯವರು ದೇಶವನ್ನು ರಕ್ಷಿಸಿದರು. ಇದು ಹೆಮ್ಮೆ ವಿಚಾರ’ ಎಂಬರ್ಥದ ಕಾಮೆಂಟ್‌ ಹಾಕಿದ್ದ ಕೇರಳದ ಪ್ರೊಫೆಸರ್‌ ಶೈಜಾ ಎ. ಅವರನ್ನು ಕ್ಯಾಲಿಕಟ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡೀನ್‌ ಹುದ್ದೆಗೆ ನೇಮಕ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌, ‘ಒಂದು ಕಡೆ ಗಾಂಧಿಯನ್ನು ಬಳಸಿಕೊಳ್ಳುವುದು. ಇನ್ನೊಂದು ಕಡೆ ಗೋಡ್ಸೆಯನ್ನು ವೈಭವೀಕರಿಸುವುದು ಈ ಸರ್ಕಾರ ಧೋರಣೆಯಾಗಿದೆ’ ಎಂದಿದೆ. ಜೊತೆಗೆ, ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ವಾಪಸು ಪಡೆಯಬೇಕು ಎಂದೂ ಒತ್ತಾಯಿಸಿದೆ.

‘ಗೋಡ್ಸೆ ಬಗ್ಗೆ ಹೆಮ್ಮೆ ಇದೆ ಎಂದು ಸಾರ್ವಜನಿಕವಾಗಿ ಹೇಳುವ ಪ್ರೊಫೆಸರ್‌ ಅವರನ್ನು ಕೇಂದ್ರ ಸರ್ಕಾರ ಡೀನ್‌ ಮಾಡಿದೆ. ‘ಗಾಂಧಿ ಮತ್ತು ಗೋಡ್ಸೆ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಲಾರೆ’ ಎಂದು ಹೇಳಿದ ಕೋಲ್ಕತ್ತ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯೊಬ್ಬರು ಈಗ ಬಿಜೆಪಿ ಸಂಸದರಾಗಿದ್ದಾರೆ. ಗಾಂಧಿಯನ್ನು ಬಳಸಿಕೊಂಡು, ಗೋಡ್ಸೆಯನ್ನು ವೈಭವೀಕರಿಸುವ ಮೋದಿ ಧೋರಣೆಯ ಭಾಗ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಹೇಳಿದರು.

ADVERTISEMENT

ಮಾ.7ಕ್ಕೆ ಅಧಿಕಾರ ಸ್ವೀಕಾರ: ಕಾಲೇಜಿನ ಯೋಜನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಶೈಜಾ ಅವರನ್ನು ಡೀನ್‌ ಆಗಿ ನೇಮಿಸಲಾಗಿದೆ. ಮಾರ್ಚ್‌ 7ಕ್ಕೆ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಶೈಜಾ ಅವರನ್ನು ನೇಮಕ ಮಾಡುವ ಮೂಲಕ ಶೈಜಾ ಅವರ ಗಾಂಧಿ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಂತಾಗಿದೆ. ಜೊತೆಗೆ ಇದು ಗೋಡ್ಸೆಯನ್ನು ಪ್ರಚಾರಕ್ಕೆ ತರುವ ಕೇಂದ್ರದ ಯತ್ನ ಕೂಡ ಆಗಿದೆ. ಗೋಡ್ಸೆಯ ಕಾರ್ಯಸೂಚಿಯನ್ನು ಸಾರ್ವಜನಿಕ ಸಂವಾದದಲ್ಲಿ ತೂರಿಸುವುದು ಕೇಂದ್ರದ ಉದ್ದೇಶ
ಕೆ.ಸಿ. ವೇಣುಗೋಪಾಲ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪೊಲೀಸ್‌ ವಿಚಾರಣೆಗೆ ಒಳಗಾಗಿದ್ದ ಶೈಜಾ

ಬಲ‍ಪಂಥೀಯ ವಿಚಾರಧಾರೆಯ ಪೇಜ್‌ವೊಂದು ಗೋಡ್ಸೆ ಕುರಿತು ಮಾಡಿದ್ದ ಪೋಸ್ಟ್‌ಗೆ ಶೈಜಾ ಅವರು ಕಾಮೆಂಟ್‌ ಮಾಡಿದ್ದರು. ಇದನ್ನು ವಿರೋಧಿಸಿ ಶೈಜಾ ವಿರುದ್ಧ ಡಿವೈಎಫ್‌ಐ ಎಸ್‌ಎಫ್‌ಐ ಮತ್ತು ಯುವ ಕಾಂಗ್ರೆಸ್‌ ಪೊಲೀಸರಿಗೆ ದೂರು ನೀಡಿದ್ದವು. ಈ ಪ್ರಕರಣ ಸಂಬಂಧ ಪೊಲೀಸರು 2024ರ ಫೆಬ್ರುವರಿಯಲ್ಲಿ ಶೈಜಾ ಅವರನ್ನು ಮನೆಯಲ್ಲಿಯೇ ವಿಚಾರಣೆಗೆ ಒಳಪಡಿಸಿದರು. ಪ್ರತಿಭಟನೆಯ ಎಚ್ಚರಿಕೆ: ಶೈಜಾ ಅವರ ನೇಮಕವನ್ನು ತೀವ್ರವಾಗಿ ವಿರೋಧಿಸಿರುವ ಡಿವೈಎಫ್‌ಐ ಯುವ ಕಾಂಗ್ರೆಸ್‌ ಹಾಗೂ ಸಿಪಿಎಂ ಪಕ್ಷಗಳು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.