ADVERTISEMENT

ಮಹಿಳೆಯರ ವಿರುದ್ಧ ಅಸಭ್ಯವಾಗಿ ವರ್ತಿಸುವವರಿಗೆ ಪಾಠ: ಕೇಜ್ರಿವಾಲ್

ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲು ಜಾರಿ ವಾರಂಟ್‌ಗೆ ಎಲ್ಲೆಡೆಯಿಂದ ಸ್ವಾಗತ

ಏಜೆನ್ಸೀಸ್
Published 7 ಜನವರಿ 2020, 13:12 IST
Last Updated 7 ಜನವರಿ 2020, 13:12 IST
   

ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇದೇ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ನ್ಯಾಯಾಲಯ ವಾರಂಟ್ ಜಾರಿ ಮಾಡಿದ್ದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕರುಸ್ವಾಗತಿಸಿದ್ದಾರೆ.

ವಾರಂಟ್ ಕುರಿತು ಪ್ರತಿಕ್ರಿಯಿಸಿದ ಅವರು, ‘ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರುಅಪರಾಧಿಗಳನ್ನು ಗಲ್ಲಿಗೇರಿಸುವಂತೆ ವಾರಂಟ್ ಜಾರಿ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವವರಿಗೆ ಇದು ಪಾಠವಾಗಲಿ ಎಂದು ಆಶಿಸುತ್ತೇನೆ. ಹಾಗೆ ಮಾಡುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂಬ ಸಂದೇಶ ಇದರಲ್ಲಿದೆ’ ಎಂದು ಹೇಳಿದ್ದಾರೆ.

‘ಇಡೀ ದೇಶ ಇದಕ್ಕಾಗಿ ಕಾಯುತ್ತಿತ್ತು. ಇದು ಕಾನೂನಿನ ಜಯ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ನ್ಯಾಯಾಲಯದ ಆದೇಶವನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಸ್ವಾಗತಿಸಿದ್ದು, ದೇಶದಲ್ಲಿರುವ ಎಲ್ಲ ನಿರ್ಭಯಾರ ಪಾಲಿಗೆ ಸಂದ ಜಯವಿದು ಎಂದು ಸ್ವಾಗತಿಸಿದ್ದಾರೆ. ‘7 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ ನಿರ್ಭಯಾ ಪೋಷಕರಿಗೆ ನನ್ನ ವಂದನೆಗಳು. ಅಂತಹ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲು 7 ವರ್ಷಗಳು ತೆಗದುಕೊಂಡದ್ದು ಯಾಕೆ? ಈ ಅವಧಿಯನ್ನು ಯಾಕೆ ಕಡಿಮೆ ಮಾಡಬಾರದು’ ಎಂದೂ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ವಕ್ತಾರೆ ಸುಷ್ಮಿತಾ ದೇವ್, ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನೀಷಾ ಗುಲಾಟಿ ಸೇರಿದಂತೆ ಅನೇಕರು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.