ಬಂಧನ
ಪ್ರಾತಿನಿಧಿಕ ಚಿತ್ರ
ರಾಂಚಿ: ನಗರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕೊಲೆಯಾದವರನ್ನು ಬುಧರಾಮ್ ಮುಂಡಾ ಮತ್ತು ಮನೋಜ್ ಕಚ್ಚಪ್ ಎಂದು ಗುರುತಿಸಲಾಗಿದೆ. ನಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಪಾ ಗ್ರಾಮದಲ್ಲಿ ಸರಸ್ವತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಂಗಳವಾರ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಚಂದನ್ ಕುಮಾರ್ ಸಿನ್ಹಾ, 'ನಾಲ್ವರು ಶಂಕಿತರ ಪೈಕಿ, ಯೋಧ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಯೋಧ ಮನೋಹರ್ ತೊಪ್ನೊ, ಸೇನಾ ಘಟಕದಿಂದ ಕದ್ದ ಎಕೆ–47 ಬಳಸಿ ಹತ್ಯೆ ಮಾಡಿದ್ದ. ಮೃತರ ಹಾಗೂ ಯೋಧನ ನಡುವೆ ಭೂ ವಿವಾದವಿತ್ತು' ಎಂದು ತಿಳಿಸಿದ್ದಾರೆ.
ಮನೋಹರ್, ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿರುವ 47 ರಾಷ್ಟ್ರೀಯ ರೈಫಲ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದೂ ಹೇಳಿದ್ದಾರೆ.
'ಸೇನಾ ಘಟಕದಿಂದ ಎಕೆ–47 ಕದ್ದಿದ್ದ ಮನೋಹರ್, ಅದನ್ನು ಸ್ನೇಹಿತ ಸುನೀಲ್ ಕಚ್ಚಪ್ ಸಹಾಯದಿಂದ ರಾಂಚಿಗೆ ರವಾನಿಸಿದ್ದ. ಸದ್ಯ ಆತನನ್ನೂ ಬಂಧಿಸಲಾಗಿದೆ. ಉಳಿದ ಇಬ್ಬರು ಶಂಕಿತರಿಗಾಗಿ ಶೋಧ ನಡೆಯುತ್ತಿದೆ' ಎಂದು ವಿವರಿಸಿದ್ದಾರೆ.
'ಮನೋಹರ್, ಮೃತ ಬುಧರಾಮ್ನ ಸಹೋದರ ಭಾನಿಚರ ಮುಂಡಾ ಬಳಿ 2015–16ರಲ್ಲಿ ₹ 4 ಲಕ್ಷ ನೀಡಿ ಜಮೀನು ಖರೀದಿಸಿದ್ದ. ಅದಾದನಂತರ, ಭಾನಿಚರ ಅಪಘಾತದಲ್ಲಿ ಮೃತಪಟ್ಟಿದ್ದು. ತರುವಾಯ, ಜಮೀನು ಹಸ್ತಾಂತರಿಸಲು ಬುಧರಾಮ್ ನಿರಾಕರಿಸಿದ್ದ. ಇದರಿಂದಾಗಿ, ಇಬ್ಬರ ನಡುವೆ ಧ್ವೇಷ ಬೆಳೆದಿತ್ತು' ಎಂಬುದಾಗಿ ವಿಚಾರಣೆ ವೇಳೆ ಸುನೀಲ್ ಹೇಳಿಕೆ ನೀಡಿದ್ದಾನೆ.
ಅದರಂತೆ, ಮನೋಹರ್ ಮತ್ತು ಸುನೀಲ್, ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.