ADVERTISEMENT

ಪಶ್ಚಿಮ ಬಂಗಾಳ ಹಿಂಸಾಚಾರ|300-400 ಬಿಜೆಪಿ ಕಾರ್ಯಕರ್ತರು ಅಸ್ಸಾಂಗೆ: ಹಿಮಂತ ಶರ್ಮಾ

ಪಿಟಿಐ
Published 5 ಮೇ 2021, 3:46 IST
Last Updated 5 ಮೇ 2021, 3:46 IST
ಹಿಮಂತ ಬಿಶ್ವ ಶರ್ಮಾ: ಪಿಟಿಐ ಚಿತ್ರ
ಹಿಮಂತ ಬಿಶ್ವ ಶರ್ಮಾ: ಪಿಟಿಐ ಚಿತ್ರ   

ಕೊಲ್ಕತ್ತ/ಗುವಾಹಟಿ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಳಿಕ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಯುತ್ತಿದೆ. . ಹೀಗಾಗಿ, ಜೀವ ಭಯದಿಂದ 300–400 ಬಿಜೆಪಿ ಕಾರ್ಯಕರ್ತರು ಕುಟುಂಬ ಸಮೇತ ಮನೆ ಬಿಟ್ಟು ಅಸ್ಸಾಂಗೆ ಬಂದಿದ್ದಾರೆ ಸಚಿವ ಹಿಮಂತ ಬಿಶ್ವಾ ಶರ್ಮಾ ಹೇಳಿದ್ದಾರೆ.

ಇದೇವೇಳೆ, ‘ರಾಕ್ಷಸತ್ವದ ಈ ಕೊಳಕು ನೃತ್ಯ’ ನಿಲ್ಲಿಸಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದ್ದಾರೆ.

‘ದುಃಖಕರ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರದಿಂದ ನಲುಗಿದ ಬಿಜೆಪಿಯ 300-400 ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರು ಅಸ್ಸಾಂನ ಧುಬ್ರಿಗೆ ಬಂದಿದ್ದಾರೆ’ ಎಂದು ಅಸ್ಸಾಂನ ಆರೋಗ್ಯ ಮತ್ತು ಹಣಕಾಸು ಸಚಿವರು ಟ್ವೀಟ್ ಮಾಡಿದ್ದಾರೆ.

ADVERTISEMENT

‘ನಾವು ಅವರಿಗೆ ಆಶ್ರಯ ಮತ್ತು ಆಹಾರವನ್ನು ನೀಡುತ್ತಿದ್ದೇವೆ. ಮಮತಾ ದೀದಿ ಈ ರಾಕ್ಷಸತ್ವದ ಕೊಳಕು ನೃತ್ಯವನ್ನು ನಿಲ್ಲಿಸಬೇಕು! ಬಂಗಾಳದಲ್ಲಿ ಉತ್ತಮ ಪರಿಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ಬಳಿಕ ಸೋಮವಾರದಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಘರ್ಷಣೆಗಳಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದು, ಮತ್ತೆ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರ್ಯಕರ್ತರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸರ್ಕಾರಿ ಪ್ರಾಯೋಜಿತ ಹಿಂಸಾಚಾರದಲ್ಲಿ 6 ಮಂದಿ ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯವು ವಾಸ್ತವಿಕ ವರದಿ ಕೇಳಿದೆ.

ಸತತ ಎರಡನೇ ಬಾರಿಗೆ ಅಸ್ಸಾಂನಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ, ಇಲ್ಲಿ ನಾವು ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ‘ಹಲ್ಲೆ ಮಾಡುವುದಿರಲಿ’ ಒಂದು ಹೀಯಾಳಿಕೆ ಮಾತನ್ನೂ ಆಡಿಲ್ಲ ಎಂದು ಶರ್ಮಾ ಹೇಳಿದ್ದಾರೆ..

‘ನಮಗೆ ಪಶ್ಚಿಮ ಬಂಗಾಳ ತುಂಬಾ ದೂರವಿಲ್ಲ. ಆದರೆ ಅಲ್ಲಿ ನಡೆಯುತ್ತಿರುವುದೇನು? ದೀದಿಯ ದಾದಾಗಳು ಭಯೋತ್ಪಾದನೆಯ ಆಳ್ವಿಕೆಯನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಹತ್ಯೆ ಮಾಡಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.