ADVERTISEMENT

ಐಎಸ್ಐ ಸಹಕಾರ: ಭಾರತಕ್ಕೆ ನುಸುಳಲು 200 ಭಯೋತ್ಪಾದಕರ ಸಂಚು–ಬಂಧಿತ ಪಾಕ್ ಉಗ್ರ

ಐಎಎನ್ಎಸ್
Published 11 ನವೆಂಬರ್ 2021, 16:35 IST
Last Updated 11 ನವೆಂಬರ್ 2021, 16:35 IST
ದೇಶದ ಗಡಿಭಾಗದಲ್ಲಿ ಭಾರತೀಯ ಸೇನೆಯ ಯೋಧರು ನಿಗಾ ವಹಿಸಿರುವುದು
ದೇಶದ ಗಡಿಭಾಗದಲ್ಲಿ ಭಾರತೀಯ ಸೇನೆಯ ಯೋಧರು ನಿಗಾ ವಹಿಸಿರುವುದು   

ನವದೆಹಲಿ: ಭಯೋತ್ಪಾದಕರು ಭಾರತದೊಳಗೆ ನುಸುಳಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಯು (ಐಎಸ್‌ಐ) ಸಹಕರಿಸುತ್ತಿರುವ ಮಾಹಿತಿಯನ್ನು ಬಂಧಿತ ಉಗ್ರ ಅಲಿ ಬಾಬರ್‌ (19) ಹೊರ ಹಾಕಿದ್ದಾನೆ. ಸೆಪ್ಟೆಂಬರ್‌ 26ರಂದು ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಿಂದ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಅಲಿ ಬಾಬರ್‌ನನ್ನು ಬಂಧಿಸಿತ್ತು.

ಡಿಸೆಂಬರ್‌ನಲ್ಲಿ ತೀವ್ರ ಹಿಮಪಾತ ಆಗುವುದಕ್ಕೂ ಮುನ್ನವೇ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಸುಮಾರು 200 ಭಯೋತ್ಪಾದಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಿವಿಧ ಅಡಗುತಾಣಗಳಲ್ಲಿ ಕಾಯುತ್ತಿರುವುದಾಗಿ ಬಾಬರ್‌ ಹೇಳಿದ್ದಾನೆ. ಐಎಸ್‌ಐ ಬೆಂಬಲದ ಮೂಲಕ ಉಗ್ರರು ದೇಶದ ಒಳಗೆ ನುಸುಳಲು ಸಜ್ಜಾಗಿರುವುದಾಗಿ ಗುರುವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮುಂದೆ ಬಾಬರ್‌ ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಶಿಬಿರಗಳಲ್ಲಿ ಪಾಕಿಸ್ತಾನದ ಸೇನೆಯೂ ಸಹ ಉಗ್ರರಿಗೆ ಸಹಕರಿಸುತ್ತಿರುವುದಾಗಿ ಹೇಳಿದ್ದಾನೆ.

ADVERTISEMENT

ಉರಿ ವಲಯದಲ್ಲಿ ಭಾರತೀಯ ಸೇನೆಯು ಸೆಪ್ಟೆಂಬರ್‌ 26ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಬಾಬರ್‌ನನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್‌ 18ರಂದು ಇತರೆ ಐದು ಜನ ಉಗ್ರರೊಂದಿಗೆ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಿದ್ದಾಗಿ ಬಾಬರ್‌ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ದೇಶದೊಳಗೆ ನುಸುಳಲು ಬಳಸಿದ ಮಾರ್ಗ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಕೊಳ್ಳಲು ಮಾಡಿಕೊಂಡಿದ್ದ ಸ್ಥಳೀಯರ ಸಂಪರ್ಕ ಸೇರಿದಂತೆ ಇನ್ನಷ್ಟು ಮಾಹಿತಿಯನ್ನು ಕಲೆಹಾಕಲು ಎನ್‌ಐಎ ಪ್ರಯತ್ನಿಸುತ್ತಿದೆ.

ಮುಂದಿನ ಕೆಲವು ವಾರಗಳಲ್ಲಿ ಉಗ್ರರು ಒಳನುಸುಳಲು ತೀವ್ರ ಪ್ರಯತ್ನ ನಡೆಸುವ ಕುರಿತು ಗುಪ್ತಚರ ಸಂಸ್ಥೆಗಳಿಂದಲೂ ಎ‌ಚ್ಚರಿಕೆ ರವಾನೆಯಾಗಿದೆ. ಹಿಮ ಸುರಿಯುವಿಕೆಯ ಪ್ರಮಾಣ ಹೆಚ್ಚುವುದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಭಯೋತ್ಪಾದಕರು ಕಾಯುತ್ತಿರುವ ಬಗ್ಗೆ ತಿಳಿಸಲಾಗಿದೆ.

ಗಡಿ ನಿಯಂತ್ರಣ ರೇಖೆಯ ಸಮೀಪ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಗಸ್ತು ತಿರುಗುವುದನ್ನು ಹೆಚ್ಚಿಸಿದೆ. ಸಿಆರ್‌ಪಿಎಫ್‌, ಕೇಂದ್ರದ ಗುಪ್ತಚರ ಸಂಸ್ಥೆಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚರಣೆ ಪಡೆಗಳು ಭಿಂಬೆರ್‌ ಗಡಿ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿವೆ. ಇತ್ತೀಚೆಗೆ ಉಗ್ರರು ದೇಶದೊಳಗೆ ನುಸುಳಲು ಈ ಪ್ರದೇಶವನ್ನು ಬಳಕೆ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಭಾರತದೊಳಗೆ ನುಸುಳಲು ಐಎಸ್‌ಐ ಎಂಟು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದು, ಉಗ್ರರ ಗುಂಪುಗಳನ್ನು ಒಗ್ಗೂಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ. ಐಎಸ್‌ಐ ಮತ್ತು ಉಗ್ರರ ನಡುವಿನ ಸಂದೇಶಗಳನ್ನು ಭಾರತದ ಗುಪ್ತಚರ ಸಂಸ್ಥೆಗಳು ಡಿಕೋಡ್‌ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಿವೆ.

ಮುಜಾಫರಬಾದ್‌ನಲ್ಲಿರುವ ಲಷ್ಕರ್‌–ಎ–ತಯ್ಬಾದ ಹೊಸ ಕಚೇರಿಯಲ್ಲಿ ಉಗ್ರ ಸಂಘಟನೆಗಳ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ ಸಭೆಯಲ್ಲಿ ಜೈಷ್–ಎ–ಮೊಹಮ್ಮದ್‌, ಲಷ್ಕರ್‌–ಎ–ತಯ್ಬಾ ಹಾಗೂ ಅಲ್‌–ಬಾದ್ರೆ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು. ಡಿಸೆಂಬರ್‌ಗೂ ಮುನ್ನ ಉಗ್ರರನ್ನು ಭಾರತದೊಳಗೆ ನುಸುಳುವಂತೆ ಮಾಡಲು ಸ್ಪಷ್ಟ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.