ADVERTISEMENT

ಗೋವಾ: ಎಎಪಿಯಿಂದ ಸ್ಪರ್ಧಿಸಲು ಪರ್‍ರೀಕರ್‌ ಮಗ ಉತ್ಪಲ್‌ಗೆ ಕೇಜ್ರಿವಾಲ್‌ ಆಹ್ವಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2022, 10:11 IST
Last Updated 20 ಜನವರಿ 2022, 10:11 IST
ಅರವಿಂದ್‌ ಕೇಜ್ರಿವಾಲ್‌ ಮತ್ತು ಉತ್ಪಲ್‌ ಪರ್‍ರೀಕರ್
ಅರವಿಂದ್‌ ಕೇಜ್ರಿವಾಲ್‌ ಮತ್ತು ಉತ್ಪಲ್‌ ಪರ್‍ರೀಕರ್   

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಅವರನ್ನು ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಸೇರುವಂತೆ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಆಹ್ವಾನಿಸಿದ್ದಾರೆ.

'ಬಿಜೆಪಿಯು ಬಳಸಿ ಬಿಸಾಡುವ ನೀತಿಯನ್ನು ಪರ್‍ರೀಕರ್‌ ಅವರ ಕುಟುಂಬದೊಂದಿಗೂ ನಡೆಸಿರುವುದು ಗೋವಾ ಜನತೆಗೆ ತೀವ್ರ ಬೇಸರ ಮೂಡಿಸಿದೆ. ಮನೋಹರ್‌ ಪರ್‍ರೀಕರ್‌ ಅವರ ಮೇಲೆ ನನಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಉತ್ಪಲ್‌ ಅವರು ಎಎಪಿ ಸೇರಿ, ಪಕ್ಷದ ಟಿಕೆಟ್‌ ಮೂಲಕ ಚುನಾವಣೆ ಕಣಕ್ಕಿಳಿಯಲಿ' ಎಂದು ಟ್ವೀಟಿಸಿದ್ದಾರೆ.

ಮತ್ತೊಂದು ಕಡೆ ಬಿಜೆಪಿ ಸಹ ಉತ್ಪಲ್‌ ಅವರಿಗೆ ಪಕ್ಷದ ಟಿಕೆಟ್‌ ನೀಡಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ADVERTISEMENT

ಆದರೆ, ಗೋವಾದ ಬಿಚೊಲಿಮ್‌ ಕ್ಷೇತ್ರದಿಂದ ಬಿಜೆಪಿಯು ಉತ್ಪಲ್‌ ಅವರಿಗೆ ಟಿಕೆಟ್‌ ನೀಡಲು ನಿರ್ಧರಿಸಿಲ್ಲ. ಪಕ್ಷದ ಮುಖಂಡರು ಹಾಗೂ ವಿಧಾನಸಭೆಯ ಸಭಾಪತಿ ರಾಜೇಶ್‌ ಪಟ್ನೇಕರ್‌ ಅವರನ್ನು ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಆರೋಗ್ಯ ಸಮಸ್ಯೆಯ ಕಾರಣಗಳಿಂದಾಗಿ ಪಟ್ನೇಕರ್‌ ಸ್ಪರ್ಧಿಸುವುದು ಅನುಮಾನ ಎನ್ನಲಾಗಿದೆ.

ಮನೋಹರ್‌ ಪರ್‍ರೀಕರ್‌ ಅವರು ಸ್ಪರ್ಧಿಸಿದ್ದ ಪಣಜಿ ಕ್ಷೇತ್ರದಲ್ಲಿ ಉತ್ಪಲ್‌ ಅವರು ಮನೆ–ಮನೆ ಭೇಟಿಯನ್ನು ಈಗಾಗಲೇ ಆರಂಭಿಸಿದ್ದಾರೆ. ಮನೋಹರ್‌ ಪರ್‍ರೀಕರ್‌ ಅವರು 2019ರಲ್ಲಿ ನಿಧನರಾದ ಬಳಿಕ ಬಿಜೆಪಿಯು ಯುವ ಅಭ್ಯರ್ಥಿ ಸಿದ್ಧಾರ್ಥ್‌ ಕುಂಚಲೇಂಕರ್‌ ಅವರನ್ನು ಕಣಕ್ಕಿಳಿಸಿತ್ತು. ಆ ಉಪಚುನಾವಣೆಯಲ್ಲು ಗೋವಾದ ಪ್ರಬಲ ಅಭ್ಯರ್ಥಿ, ಆಗ ಕಾಂಗ್ರೆಸ್‌ನಲ್ಲಿದ್ದ ಅಟನಾಸಿಯೊ ಮಾನ್ಸೆರಟೆ (ಬಾಬುಷ್‌) ಗೆಲುವು ಸಾಧಿಸಿದ್ದರು.

ಈಗ ಪಣಜಿಯಿಂದ ಅಟನಾಸಿಯೊ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.