ADVERTISEMENT

ಅಬಕಾರಿ ಹಗರಣ: ಹೈಕೋರ್ಟ್ ತೀರ್ಪು ವಿರುದ್ಧ ‘ಸುಪ್ರೀಂ’ ಮೊರೆಹೋಗಲಿರುವ ಕೇಜ್ರಿವಾಲ್

ಪಿಟಿಐ
Published 9 ಏಪ್ರಿಲ್ 2024, 12:15 IST
Last Updated 9 ಏಪ್ರಿಲ್ 2024, 12:15 IST
ಅರವಿಂದ್ ಕೇಜ್ರಿವಾಲ್ 
ಅರವಿಂದ್ ಕೇಜ್ರಿವಾಲ್    

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿದ್ದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದ್ದಾರೆ ಎಂದು ಎಎಪಿ ತಿಳಿಸಿದೆ.

ಕೋರ್ಟ್ ತೀರ್ಪಿನ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿರುವ ಎಎಪಿಯ ಹಿರಿಯ ನಾಯಕ ಹಾಗೂ ದೆಹಲಿ ಸಚಿವ ಸೌರಭ್ ಭಾರಧ್ವಜ್, ‘ನಾವು ಹೈಕೋರ್ಟ್‌ ತೀರ್ಮಾನವನ್ನು ಗೌರವಿಸುತ್ತೇವೆ. ಅದರೆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಿದ್ದೇವೆ. ನಡೆದಿದೆ ಎನ್ನಲಾದ ಅಬಕಾರಿ ನೀತಿ ಹಗರಣವು ದೊಡ್ಡ ರಾಜಕೀಯ ಪಿತೂರಿಯಾಗಿದೆ ಎಂದು ಅವರು ದೂರಿದ್ದಾರೆ.

ಆಪಾದಿತ ಈ ಹಗರಣದಲ್ಲಿ ಜಾರಿ ನಿರ್ದೇಶನಾಲಯವೋ, ಕೇಂದ್ರ ತನಿಖಾ ತಂಡವೋ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ಪತ್ತೆ ಮಾಡಲು ವಿಫಲವಾಗಿದೆ. ಅರವಿಂದ ಕೇಜ್ರಿವಾಲ್ ಅವರನ್ನು ಮುಗಿಸುವ ಮತ್ತು ದೆಹಲಿ ಹಾಗೂ ಪಂಜಾಬ್‌ನಲ್ಲಿರುವ ಎಎಪಿ ಸರ್ಕಾರವನ್ನು ಹತ್ತಿಕ್ಕಲು ಮಾಡಿರುವ ರಾಜಕೀಯ ಪಿತೂರಿ ಇದು ಎಂದು ಅವರು ನುಡಿದಿದ್ದಾರೆ.

ADVERTISEMENT

ಪ್ರಕರಣ ಸಂಬಂಧ ಎಎಪಿ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್ ಅವರಿಗೆ ಜಾಮೀನು ಲಭಿಸಿದಂತೆಯೇ ಕೇಜ್ರಿವಾಲ್ ಅವರಿಗೂ ಸುಪ್ರೀಂ ಕೋರ್ಟ್‌ನಲ್ಲಿ ರಿಲೀಫ್ ಸಿಗಲಿದೆ ಎಂದು ಭಾರಧ್ವಜ್ ಆಶಾಭಾವನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.