ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ಆರ್ಎಸ್ಎಸ್, ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಪಕ್ಷದ ಲೋಕಸಭಾ ಸಚೇತಕ ಮಾಣಿಕ್ಯಂ ಠಾಗೂರ್ ಆರೋಪಿಸಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲಿನ ಆತ್ಮವಲೋಕನಕ್ಕಾಗಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ಬಳಿಕ ಪಕ್ಷದ ನಾಯಕತ್ವದ ಕುರಿತಾಗಿ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಗಾಂಧಿ ಕುಟುಂಬ ಹಿಂದಕ್ಕೆ ಸರಿದು, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಟ್ಟಾ ರಾಹುಲ್ ಗಾಂಧಿ ನಿಷ್ಠಾವಂತರಾಗಿರುವ ಮಾಣಿಕ್ಯಂ ಠಾಗೂರ್ ಅವರು, ಕಾಂಗ್ರೆಸ್ ಪಕ್ಷವನ್ನು ಕೊಲ್ಲಲು ಮತ್ತು ಭಾರತದ ಚಿಂತನೆಗಳನ್ನು ನಾಶಪಡಿಸಲು ಆರ್ಎಸ್ಎಸ್ ಮತ್ತು ಬಿಜೆಪಿ ಗಾಂಧಿ ಕುಟುಂಬವನ್ನು ಪಕ್ಷದ ನಾಯಕತ್ವದಿಂದ ಕೆಳಗಿಳಿಸಲು ಬಯಸುತ್ತಿವೆ ಎಂದಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿ ನೆಹರೂ-ಗಾಂಧಿ ಕುಟುಂಬವನ್ನು ನಾಯಕತ್ವದಿಂದ ಹೊರಗಿಡಬೇಕು ಎಂದು ಏಕೆ ಬಯಸುತ್ತಿದೆ? ಕಾರಣ ಗಾಂಧಿ ಕುಟುಂಬದ ನಾಯಕತ್ವವಿಲ್ಲದ ಕಾಂಗ್ರೆಸ್ ಜನತಾ ಪಕ್ಷವಾಗಲಿದೆ. ಇದರಿಂದ ಕಾಂಗ್ರೆಸ್ಅನ್ನು ಸಾಯಿಸುವುದು ಸುಲಭ. ನಂತರ ಭಾರತದ ಜಾತ್ಯತೀತ ಚಿಂತನೆಯನ್ನು ಸಾಯಿಸುವುದು ಸುಲಭವಾಗಲಿದೆ. ಇದು ಕಪಿಲ್ ಸಿಬಲ್ ಅವರಿಗೆ ಗೊತ್ತಿದೆ. ಹಾಗಿದ್ದು ಅವರೇಕೆ ಆರ್ಎಸ್ಎಸ್, ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ?' ಎಂದು ಠಾಗೂರ್ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.