ಹೈದರಾಬಾದ್: ಚಾಲನೆ ತರಬೇತಿ ಪಡೆದು ಚಾಲಕರಾಗುವುದಾದರೆ ಅಥವಾ ಬೇರೆ ವೃತ್ತಿ ಮಾಡುವುದಾದರೆ, ನಾಲ್ಕು ವರ್ಷ ಸೇನೆಯಲ್ಲಿರಬೇಕೇ ಎಂದುಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು, ಅಗ್ನಿವೀರರಿಗೆ ಚಾಲನೆ, ಧೋಬಿ ಕೆಲಸ ಸೇರಿದಂತೆ ಇತರ ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಿದ್ದರು. ಅವರ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಒವೈಸಿ, ಸೇನೆಯಲ್ಲಿ ಸೇವೆ ಸಲ್ಲಿಸುವುದು ಸಾಟಿಯಿಲ್ಲದ್ದು. ಯೋಧರು ದೇಶಕ್ಕಾಗಿ ವೈರಿಗಳನ್ನು ಕೊಲ್ಲುವ ಅಥವಾ ಪ್ರಾಣತ್ಯಾಗಕ್ಕೂಸಿದ್ಧರಿರುತ್ತಾರೆ. ಚಾಲಕರಾಗಲು ಅಥವಾ ಬೇರೆ ಕೆಲಸ ಮಾಡಲು ಬಯಸುವುದಾದರೆ, ಅವರು ಸೇನೆಯಲ್ಲಿ ನಾಲ್ಕು ವರ್ಷ ಇರಬೇಕೇ? ಎಂದು ಪ್ರಶ್ನಿಸಿದ್ದಾರೆ.
'ಬಿಜೆಪಿಯು ಅಗ್ನಿವೀರರನ್ನು ಕಾವಲುಗಾರರನ್ನಾಗಿ ನೇಮಿಸಿಕೊಳ್ಳಲು ನೋಡುತ್ತಿದೆಯೇಹೊರತು ಬೇರೇನೂ ಅಲ್ಲ ಎಂಬುದು ಸ್ಪಷ್ಟ' ಎಂದು ದೂರಿರುವಓವೈಸಿ, ಪ್ರಧಾನಿ ಮೋದಿ ಅವರು ದೇಶದ ಭದ್ರತೆಯ ವಿಚಾರದಲ್ಲಿಆಟವಾಡುತ್ತಿದ್ದು, ಯುವಕರ ಭವಿಷ್ಯವನ್ನು ನಾಶಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ಒವೈಸಿ,'ಈ ಕುತಂತ್ರದ ಕೆಲಸವನ್ನು ನಿಲ್ಲಿಸುವಂತೆ, ದೇಶದ ಯುವಕರ ಮಾತುಗಳನ್ನು ಆಲಿಸುವಂತೆ, ಕ್ರೂರ ಯೋಜನೆಯನ್ನು ಹಿಂಪಡೆಯುವಂತೆ ಮತ್ತು ಸೇನಾ ಪಡೆಗಳಲ್ಲಿನ ಯೋಧರು, ಶಸ್ತ್ರಾಸ್ತ್ರಗಳ ಕೊರತೆಯನ್ನು ಸರಿದೂಗಿಸುವಂತೆಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು,'ಸೇನೆಯಿಂದ ನಿವೃತರಾದ ಯೋಧರನ್ನು ತಮ್ಮ ಕಚೇರಿಗಳ ಕಾವಲುಗಾರರನ್ನಾಗಿ ನೇಮಿಸಿಕೊಳ್ಳುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಗೌರವಯುತವಾದ ಸೇನೆಗೆ ಮತ್ತುಸೈನಿಕರಿಗೆ ಮೋದಿ ಅವರ ಪಕ್ಷ ನೀಡುವ ಘನತೆ ಇದೆಯೇ?' ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, 'ಇಂತಹ ಆಡಳಿತ ಪಕ್ಷವನ್ನು ದೇಶದಲ್ಲಿ ಹೊಂದಿರುವುದು ದುರದೃಷ್ಟಕರ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಯಾವುದೇ ಚಿಂತನೆ, ಯೋಜನೆಗಳಿಲ್ಲದೆ ಕೈಗೊಂಡ ನೋಟುರದ್ದು, ಲಾಕ್ಡೌನ್ನಂತಹ ದುಡುಕು ನಿರ್ಧಾರಗಳು, ಭಾರತದ ಆರ್ಥಿಕತೆ ಮತ್ತು ಸಮಾಜದ ಮೇಲೆ ಉಂಟುಮಾಡಿದ ದುಷ್ಪರಿಣಾಮಗಳನ್ನು ನೋಡಿದ್ದೇವೆ' ಎಂದಿರುವ ಅವರು, 'ಪ್ರಧಾನಿ ಮೋದಿ ಅವರು ರಾಷ್ಟ್ರದ ಭದ್ರತೆ ವಿಚಾರದಲ್ಲಿಯೂ ಅಂತಹದೇ ಕೆಲಸ ಮಾಡಲು ಹೊರಟಿದ್ದಾರೆಯೇ?' ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.