ಇಂದೋರ್: ‘ಇಬ್ಬರೂ ಕಾಂಗ್ರೆಸ್ನ ಆಸ್ತಿಗಳು‘– ಇದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಶಾಸಕ ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ ಪರಿ.
‘ಸಚಿನ್ ಪೈಲಟ್ ಒಬ್ಬ ದ್ರೋಹಿ, ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ‘ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅಶೋಕ್ ಗೆಹಲೋತ್ ಹೇಳಿದ್ದರು. ‘ಹಿರಿಯ ನಾಯರಾದವರು ಈ ರೀತಿ ಹೇಳಿಕೆ ನೀಡಬಾರದು‘ ಎಂದು ಸಚಿನ್ ಪೈಲಟ್ ತಿರುಗೇಟು ನೀಡಿದ್ದರು. ಎರಡು ಬಣಗಳ ನಡುವಿನ ಗುದ್ದಾಟ ರಾಜಸ್ಥಾನ ಕಾಂಗ್ರೆಸ್ನಲ್ಲಿ ಸಂಚಲನ ಉಂಟು ಮಾಡಿತ್ತು.
ಈ ಸಂಬಂಧ ಸೋಮವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಈ ರೀತಿ ಉತ್ತರಿಸಿದ್ದಾರೆ.
ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯ ಮಧ್ಯಪ್ರದೇಶದ ಇಂದೋರ್ನಲ್ಲಿ ಇದ್ದು, ಈ ವೇಳೆ ಪತ್ರಕರ್ತರು ಅವರನ್ನು ಪ್ರಶ್ನೆ ಮಾಡಿದ್ದಾರೆ.
‘ನಾನು ಪ್ರತೀ ಬಾರಿ ಒಂದೊಂದು ರಾಜ್ಯ ಪ್ರವೇಶ ಮಾಡುವಾಗಲೂ ಅಲ್ಲಿ ಸಮಸ್ಯೆ ಇದೆ ಎಂದು ನೀವು ಹೇಳುತ್ತೀರಿ. ಈಗ ರಾಜಸ್ಥಾನದಲ್ಲಿ ಸಮಸ್ಯೆ ಇದೆ ಎಂದು ನೀವು ಹೇಳುತ್ತೀದ್ದೀರಿ. ಅವರಿಬ್ಬರೂ ಕಾಂಗ್ರೆಸ್ನ ಆಸ್ತಿಗಳು‘ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿಂದೆ ಇವರಿಬ್ಬರ ನಡುವಣ ಗುದ್ದಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ನಾಯಕ ಜೈರಾಮ್ ರಮೇಶ್ ‘ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ‘ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.