ಜೆಮಿನಿ ಎಐ ಚಿತ್ರ
ಛತ್ರಪತಿ ಸಾಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿನ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರು, ಅದನ್ನು ಎಳೆದೊಯ್ಯಲು ಎಸ್ಯುವಿ ಬಳಸಿದ ಪ್ರಕರಣ ವರದಿಯಾಗಿದೆ. ಆದರೆ ಕಳ್ಳರ ಯತ್ನ ಕೈಗೂಡಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಸಂಬಂಧಿತ ಅಪರಿಚಿತ ಕಳ್ಳರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ಸೋಮವಾರ ನಸುಕಿನ 3ರಿಂದ 4ರ ಒಳಗೆ ನಡೆದಿದೆ. ಭಾರತೀಯ ಸ್ಟೇಟ್ ಬ್ಯಾಂಕ್ನ ಶಹನೂರ್ವಾಡಿ ಶಾಖೆಯಲ್ಲಿರುವ ಎಟಿಎಂ ಕದ್ದೊಯ್ಯಲು ಕಳ್ಳರ ತಂಡ ಯತ್ನಿಸಿದೆ.
ನಾಲ್ಕು ಜನರಿದ್ದ ಈ ಕಳ್ಳರ ತಂಡವು ಎಸ್ಯುವಿ ವಾಹನ ಬಳಸಿದೆ. ಎಟಿಎಂಗೆ ಹಳದಿ ಬಣ್ಣದ ಬೆಲ್ಟ್ ಕಟ್ಟಿದ್ದರು. ನಂತರ ಎಸ್ಯವಿಯಿಂದ ಯಂತ್ರವನ್ನು ಹೊರಗೆಳಯುವ ಯತ್ನ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
‘ಮೊದಲು ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಳ್ಳರು ನಾಶಪಡಿಸಿದ್ದಾರೆ. ಎಟಿಎಂ ಯಂತ್ರ ತೆರೆದು ಹಣ ದೋಚುವ ಯತ್ನವನ್ನೂ ನಡೆಸಿದ್ದಾರೆ. ಆದರೆ ಹಣವನ್ನು ಪಡೆಯಲು ಅವರಿಂದ ಸಾಧ್ಯವಾಗಿಲ್ಲ’ ಎಂದು ವಿವರಿಸಿದ್ದಾರೆ.
‘ಬ್ಯಾಂಕ್ನ ಶಾಖಾ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕಳ್ಳತನ, ಕಿಡಿಗೇಡಿತನ, ಅಪರಾಧ ಕೃತ್ಯದಲ್ಲಿ ಸಾಮಾನ್ಯ ಉದ್ದೇಶ ಹೊಂದಿರುವ ಪ್ರಕರಣ ದಾಖಲಾಗಿದೆ’ ಎಂದು ಜವಾಹರನಗರ ಪೊಲೀಸರು ಸೋಮವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.