ADVERTISEMENT

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು: ಉತ್ತರ ಪ್ರದೇಶ ಸರ್ಕಾರ

ಪಿಟಿಐ
Published 22 ಫೆಬ್ರುವರಿ 2021, 14:32 IST
Last Updated 22 ಫೆಬ್ರುವರಿ 2021, 14:32 IST
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಪಿಟಿಐ ಚಿತ್ರ)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಪಿಟಿಐ ಚಿತ್ರ)   

ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ‘ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವಿಮಾನ ನಿಲ್ದಾಣ’ ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರವು ಸೋಮವಾರ ಮಂಡಿಸಿರುವ ಬಜೆಟ್‌ನಲ್ಲಿ ಈ ಕುರಿತು ಉಲ್ಲೇಖಿಸಲಾಗಿದ್ದು, ವಿಮಾನ ನಿಲ್ದಾಣಕ್ಕಾಗಿ ₹101 ಕೋಟಿ ಮೀಸಲಿಡಲಾಗಿದೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಮುಂದೆ ಅದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲಾಗುವುದು. ಜತೆಗೆ, ಜೆವರ್ ವಿಮಾನ ನಿಲ್ದಾಣದಲ್ಲಿ ರನ್‌ವೇಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದ್ದು, ₹2,000 ಕೋಟಿ ಒದಗಿಸಲಾಗುವುದು ಎಂದು ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಬಜೆಟ್ ಮಂಡನೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಅಲಿಗಡ, ಮೊರಾದಾಬಾದ್, ಮೀರತ್ ನಗರಗಳಿಗೂ ಶೀಘ್ರದಲ್ಲೇ ವಿಮಾನ ಯಾನ ಸೇವೆ ಒದಗಿಸಲಾಗುವುದು’ ಎಂದು ಹೇಳಿದ್ದಾರೆ.

ಪೂರ್ವಾಂಚಲದ ವಿಶೇಷ ಯೋಜನೆಗಳಿಗೆ ₹300 ಕೋಟಿ ಹಾಗೂ ಬುಂದೇಲ್‌ಖಂಡದ ವಿಶೇಷ ಯೋಜನೆಗಳಿಗೆ ₹210 ಕೋಟಿಯನ್ನು ವಿಶೇಷ ಪ್ರದೇಶ ಕಾರ್ಯಕ್ರಮದಡಿ ಪ್ರಸ್ತಾವಿಸಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.