ADVERTISEMENT

ಅಯೋಧ್ಯೆ ತೀರ್ಪು: ‘ಸುಪ್ರೀಂ’ ನ್ಯಾಯಪೀಠ ಹೇಳಿದ್ದಿಷ್ಟು...

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 6:28 IST
Last Updated 9 ನವೆಂಬರ್ 2019, 6:28 IST
   

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ತೀರ್ಪು ಶನಿವಾರ ಪ್ರಕಟಗೊಂಡಿದ್ದು, ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ತೀರ್ಪು ಓದಿ, ನಿರ್ಮೋಹಿ ಅಖಾಡದ ಅರ್ಜಿ ವಜಾ ಮಾಡಿತು. ರಾಮಲಲ್ಲಾ ಅನ್ನೇ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿತು. ವಿವಾದಿತ ಜಾಗ ರಾಮಲಲ್ಲಾಗೆ ಸೇರಿದ್ದು. ಅಲ್ಲಿ ರಾಮಮಂದಿರ ನಿರ್ಮಿಸಬೇಕು. ಮಂದಿರದ ಹೊಣೆಯನ್ನು ಟ್ರಸ್ಟ್‌ಗೆ ನೀಡಬೇಕು. ಟ್ರಸ್ಟ್‌ ರಚಿಸಲು, ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವು ವಿಧಿಸಲಾಗಿದೆ.

ಸುನ್ನಿ ವಕ್ಫ್‌ ಬೋರ್ಡ್‌ಗೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಬಾಬ್ರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ, ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ ಎಂದೂ ನ್ಯಾಯಪೀಠ ಹೇಳಿತು.

‘ರಾಮ ಅಲ್ಲಿಯೇ ಜನಿಸಿದ ಎಂಬುದು ಹಿಂದುಗಳ ನಂಬಿಕೆ. ನಂಬಿಕೆಯು ವೈಯಕ್ತಿಕ ವಿಷಯ ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಾನ ಅಂತ ನಂಬಿದ್ದಾರೆ, ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ಭಾವನೆಗಳಿವೆ. ಮುಸ್ಲಿಮರು ಆ ಜಾಗ ಬಾಬ್ರಿ ಮಸೀದಿಯದ್ದು ಅಂತಾರೆ. ಆದರೆ ರಾಮ ಅಲ್ಲಿ ಜನಿಸಿದ್ದ ಎಂಬ ಹಿಂದುಗಳ ನಂಬಿಕೆ ವಿವಾದರಹಿತವಾದದ್ದು. ಆದರೆ, ಈ ಭೂಮಿ ಯಾರಿಗೆ ಸೇರಿದ್ದೆಂಬ ವ್ಯಾಜ್ಯವು ಸಂಪೂರ್ಣವಾಗಿ ಕಾನೂನಿಗೆ ಸಂಬಂಧಿಸಿದ್ದು’ ಎಂದು ನ್ಯಾಯಪೀಠ ಹೇಳಿತು.

ಮಸೀದಿಗೆ ಹಾನಿ ಮಾಡಿದ್ದು, ಕಾನೂನು ಕೈಗೆ ತೆಗೆದುಕೊಂಡಿದ್ದೂ ಸರಿಯಲ್ಲ. ವಿವಾದಿತ ಜಾಗವನ್ನು ಮೂರು ಭಾಗ ಮಾಡಿದ್ದಕ್ಕೆ ಎಲ್ಲೆಡೆಯಿಂದಲೂ ವಿರೋಧವಿದೆ ಎಂಬುದನ್ನೂ ನ್ಯಾಯಪೀಠ ಉಲ್ಲೇಖಿಸಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.