ಅಯೋಧ್ಯೆಯ ರಾಮ ಮಂದಿರ
– ಪಿಟಿಐ ಚಿತ್ರ
ನವದೆಹಲಿ: ಜನವರಿ 22 2024ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ಆಗುವ ಮೂಲಕ 4 ದಶಕಗಳ ರಾಮಮಂದಿರ ಹೋರಾಟಕ್ಕೆ ತೆರೆಬಿದ್ದಿತ್ತು. ಈ ಸ್ಥಳದಲ್ಲಿ 1992ರವರೆಗೆ 16ನೇ ಶತಮಾನದ ಬಾಬರಿ ಮಸೀದಿ ಇತ್ತು. 1992ರ ಡಿಸೆಂಬರ್ 6ರಂದು ಹಿಂದೂ ಬಲಪಂಥೀಯ ಗುಂಪು ಮಸೀದಿಯನ್ನು ಕೆಡವಿತ್ತು.
ಬಾಬರಿ ಮಸೀದಿಯನ್ನು ಮೊದಲ ಮೊಘಲ್ ದೊರೆ ಬಾಬರ್ ಅವಧಿಯಲ್ಲಿ ದೇವಾಲಯವಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಅದು ರಾಮನ ಜನ್ಮಸ್ಥಳವಾಗಿತ್ತು ಎಂಬುದು ಹಿಂದೂಗಳ ವಾದವಾಗಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಭೂಮಿಯ ಮಾಲೀಕತ್ವವನ್ನು ಹಿಂದೂ ಟ್ರಸ್ಟ್ಗೆ ನೀಡಿತ್ತು. ಬಳಿಕ, ರಾಮಮಂದಿರ ನಿರ್ಮಾಣ ಆರಂಭವಾಗಿತ್ತು. 2024ರ ಜನವರಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಟಾಪನೆ ನೆರವೇರಿತ್ತು.
ಬಾಬರಿ ಮಸೀದಿ–ರಾಮ ಮಂದಿರ ನಿರ್ಮಾಣದವರೆಗಿನ ಕಾಲಾನುಕ್ರಮದ ಚಿತ್ರಣ ನೋಡುವುದಾದರೆ..
1528– ಬಾಬರಿ ಮಸೀದಿ ನಿರ್ಮಾಣ
ಬಾಬರಿ ಮಸೀದಿಯನ್ನು ಮೊದಲ ಮೊಘಲ್ ರಾಜ ಬಾಬರ್ ಆಳ್ವಿಕೆಯಲ್ಲಿ ಮೊಘಲ್ ಕಮಾಂಡರ್ ಮೀರ್ ಬಾಕಿ ನಿರ್ಮಿಸಿದ್ದರು. ರಾಮ ಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಮದೂಗು ವಾದಿಸಿದ್ದರು.
1853 – ಸಂಘರ್ಷದ ಮೊದಲ ಪ್ರಕರಣ ದಾಖಲು
ಬಾಬರ್ ಆಳ್ವಿಕೆಯಲ್ಲಿ ಮಸೀದಿ ನಿರ್ಮಾಣಕ್ಕೆ ದಾರಿ ಮಾಡಿಕೊಡಲು ದೇವಾಲಯವನ್ನು ನಾಶಪಡಿಸಲಾಯಿತು ಎಂದು ಹಿಂದೂ ಪಂಥವೊಂದು ವಾದಿಸಿತ್ತು.
1859 – ಬೇಲಿ ನಿರ್ಮಿಸಿದ ಬ್ರಿಟಿಷರು
ಬ್ರಿಟಿಷ್ ವಸಾಹತುಶಾಹಿ ಆಡಳಿತವು ಸ್ಥಳವನ್ನು ಹಿಂದೂಗಳು ಮತ್ತು ಮುಸ್ಲಿಮರಿಗೆ ಎರಡು ಪ್ರತ್ಯೇಕ ವಿಭಾಗಗಳಾಗಿ ವಿಭಜಿಸಿತು. ಮುಸ್ಲಿಮರು ಒಳಗೆ ಪ್ರಾರ್ಥಿಸಲು ಅವಕಾಶ ನೀಡಿದರೆ, ಹಿಂದೂಗಳು ಹೊರ ಅಂಗಳದಲ್ಲಿ ಪೂಜೆ ಮಾಡಲು ಅವಕಾಶ ನೀಡಿತು.
1885
ರಾಮಚಬೂತ್ರಾದಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ಮಹಾಂತ ರಘುವೀರ ದಾಸ್ ಎಂಬುವರಿಂದ ಕೋರ್ಟ್ಗೆ ಅರ್ಜಿ ಸಲ್ಲಿಕೆ. ಮರುವರ್ಷ, ಫೈಜಾಬಾದ್ ಜಿಲ್ಲಾ ನ್ಯಾಯಾಲಯದಿಂದ ಆ ಅರ್ಜಿಯ ತಿರಸ್ಕಾರ
ಡಿಸೆಂಬರ್ 23, 1949 – ಮಸೀದಿ ‘ವಿವಾದಿತ ಆಸ್ತಿ’ ಆಗುತ್ತದೆ
ಬಾಬರಿ ಮಸೀದಿಯೊಳಗೆ ರಾಮನ ವಿಗ್ರಹ ಪತ್ತೆ. ‘ರಾತ್ರಿ ವೇಳೆಯಲ್ಲಿ ಹಿಂದೂಗಳೇ ಮೂರ್ತಿಯನ್ನು ಇಟ್ಟಿದ್ದಾರೆ’ ಎಂದು ಮುಸ್ಲಿಮರ ವಾದ. ಎರಡೂ ಕಡೆಯವರಿಂದ ಪರಸ್ಪರರ ವಿರುದ್ಧ ದೂರು. ಇಡೀ ಪ್ರದೇಶವನ್ನು ‘ವಿವಾದಿತ ಪ್ರದೇಶ’ ಎಂದು ಘೋಷಿಸಿ ಮುಖ್ಯದ್ವಾರವನ್ನು ಮುಚ್ಚಿ, ಎಲ್ಲರಿಗೂ ಪ್ರವೇಶ ನಿರಾಕರಿಸಿದ ಸರ್ಕಾರ.
–1950, ಜನವರಿ 16
‘ಆಸ್ತಾನ ಜನ್ಮಭೂಮಿ’ಯಲ್ಲಿ ಸ್ಥಾಪಿಸಲಾಗಿರುವ ರಾಮನ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿಗೋಪಾಲ್ಸಿಂಗ್ ವಿಶಾರದ ಎಂಬುವರಿಂದ ವಿವಾದಿತ ಭೂಮಿಗೆ ಸಂಬಂಧಿಸಿ ಮೊದಲ ಮಾಲೀಕತ್ವ ಅರ್ಜಿ ಸಲ್ಲಿಕೆ
–1959
ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಮೂಲಕ ವಿವಾದದ ಕಣಕ್ಕೆ ಇಳಿದ ನಿರ್ಮೋಹಿ ಅಖಾಡ. ಈ ಜಾಗವನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಒತ್ತಾಯ
–1961 ಡಿಸೆಂಬರ್ 18
ಮಸೀದಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾಗವನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಉತ್ತರಪ್ರದೇಶದ ವಕ್ಫ್ ಸುನ್ನಿ ಕೇಂದ್ರೀಯ ಮಂಡಳಿಯಿಂದ ಅರ್ಜಿ ಸಲ್ಲಿಕೆ
–1983
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವ ರಾಷ್ಟ್ರವ್ಯಾಪಿ ಆಂದೋಲನವಕ್ಕೆ ವಿಶ್ವಹಿಂದೂ ಪರಿಷತ್ನಿಂದ ಚಾಲನೆ
–1986, ಫೆಬ್ರುವರಿ 1
ಹರಿಶಂಕರ್ ದುಬೆ ಎಂಬುವರ ಅರ್ಜಿಯನ್ನು ಪರಿಗಣಿಸಿ ಹಿಂದೂಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಮುಖ್ಯದ್ವಾರದ ಬೀಗವನ್ನು ತೆರೆಯುವಂತೆ ಜಿಲ್ಲಾ ನ್ಯಾಯಾಲಯದಿಂದ ಆದೇಶ. ‘ಬಾಬರಿ ಮಸೀದಿ ಕ್ರಿಯಾ ಸಮಿತಿ’ ಹುಟ್ಟುಹಾಕಿದ ಮುಸ್ಲಿಮರು
–1989
ವಿವಾದಿತ ಪ್ರದೇಶದ ಮಾಲೀಕತ್ವ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ತಿನ ಉಪಾಧ್ಯಕ್ಷ ದೇವಕಿನಂದನ ಅಗರ್ವಾಲ್ ಎಂಬುವರಿಂದ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿಕೆ
–1989, ಅಕ್ಟೋಬರ್ 23
ಫೈಜಾಬಾದ್ ಕೋರ್ಟ್ನಲ್ಲಿ ದಾಖಲಾಗಿದ್ದ ನಾಲ್ಕೂ ಪ್ರಕರಣಗಳು ಹೈಕೋರ್ಟ್ನ ವಿಶೇಷ ಪೀಠಕ್ಕೆ ವರ್ಗಾವಣೆ
–1989 ನವೆಂಬರ್
ವಿಶ್ವಹಿಂದೂ ಪರಿಷತ್ನಿಂದ ಅಯೋಧ್ಯೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಸಮ್ಮತಿ
–1990 ಸೆಪ್ಟೆಂಬರ್
ಗುಜರಾತ್ನ ಸೋಮನಾಥ್ನಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ. ಮಾರ್ಗಮಧ್ಯೆ, ಬಿಹಾರದಲ್ಲಿ ಬಂಧನ
–1990 ನವೆಂಬರ್
ವಿಶ್ವಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಅಯೋಧ್ಯೆಗೆ ಬಂದಿದ್ದ ಕರಸೇವಕರು ಹಾಗೂ ಪೊಲೀಸರ ಮಧ್ಯೆ ಸಂಘರ್ಷ. ಕರಸೇವಕರನ್ನು ನಿಯಂತ್ರಿಸಲು ಗುಂಡುಹಾರಿಸಿದ ಪೊಲೀಸರು. ಹಲವು ಕರಸೇವಕರ ಸಾವು
–1991
ಲೋಕಸಭಾ ಚುನಾವಣೆಯಲ್ಲಿ 120 ಸ್ಥಾನ ಪಡೆದು ಅತಿದೊಡ್ಡ ವಿರೋಧಪಕ್ಷವೆನಿಸಿದ ಬಿಜೆಪಿ
–1991 ಜೂನ್
ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಧಿಕಾರ, ಕಲ್ಯಾಣ್ಸಿಂಗ್ ಮುಖ್ಯಮಂತ್ರಿ
–1992 ಡಿಸೆಂಬರ್ 6
ಒಟ್ಟಾರೆ ವಿವಾದಕ್ಕೆ ಮಹತ್ವದ ತಿರುವು ನೀಡಿದ ದಿನ. ವಿಶ್ವ ಹಿಂದೂ ಪರಿಷತ್, ಬಿಜೆಪಿ ಹಾಗೂ ಶಿವಸೇನಾದ ಕಾರ್ಯಕರ್ತರಿಂದ ಬಾಬರಿ ಮಸೀದಿ ನೆಲಸಮ. ರಾಷ್ಟ್ರವ್ಯಾಪಿ ಕೋಮು ಗಲಭೆ ಆರಂಭ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು.
ಎರಡು ಎಫ್ಐಆರ್ ದಾಖಲು. ಒಂದು ಕರಸೇವಕರ ವಿರುದ್ಧ, ಇನ್ನೊಂದು ಎಲ್.ಕೆ. ಅಡ್ವಾಣಿ, ಅಶೋಕ್ ಸಿಂಘಲ್, ವಿನಯ್ ಕಟಿಯಾರ್, ಉಮಾಭಾರತಿ, ಸಾಧ್ವಿ ಋತಂಬರಾ, ಮುರಳಿಮನೋಹರ ಜೋಶಿ, ಗಿರಿರಾಜ್ ಕಿಶೋರ್ ಹಾಗೂ ವಿಷ್ಣು ಹರಿ ದಾಲ್ಮಿಯಾ ಅವರ ವಿರುದ್ದ. ಎಂಟು ಮಂದಿಯ ವಿರುದ್ಧ ರಾಮಕಥಾಕುಂಜ ಸಭಾ ಮಂಚ್ದಲ್ಲಿ ದ್ವೇಷ ಭಾಷಣ ಮಾಡಿದ ಆರೋಪ (ಇವರಲ್ಲಿ ಅಶೋಕ್ ಸಿಂಘಲ್ ಹಾಗೂ ಗಿರಿರಾಜ್ ಕಿಶೋರ್ ಅವರು ನಿಧನರಾಗಿದ್ದಾರೆ)
ಡಿಸೆಂಬರ್ 6ರ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಮಸೀದಿ ಕೆಡವಿದ 10 ದಿನಗಳ ಬಳಿಕ (ಡಿ.16ರಂದು) ಪಂಜಾಬ್ ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿಎಂ.ಎಸ್. ಲಿಬರ್ಹಾನ್ ಆಯೋಗ ರಚನೆ. ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚನೆ (ಆದರೆ ಈ ಅವಧಿಯನ್ನು 48 ಬಾರಿ ವಿಸ್ತರಿಸಲಾಯಿತು ಮತ್ತು ಇದಕ್ಕಾಗಿ ಸುಮಾರು ₹ 8 ಕೋಟಿ ವ್ಯಯಿಸಲಾಗಿತ್ತು. ಸುಮಾರು 15 ವರ್ಷಗಳ ನಂತರ ವರದಿ ಸಲ್ಲಿಕೆಯಾಯಿತು)
–1996 ಮೇ
ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ. ಅಟಲ್ಬಿಹಾರಿ ವಾಜಪೇಯಿ 13 ದಿನಗಳ ಅವಧಿಗೆ ಪ್ರಧಾನಿ. 1998ರಲ್ಲಿ ಪುನಃ ಸರ್ಕಾರ ರಚಿಸಿದ ಬಿಜೆಪಿ. 13 ತಿಂಗಳಿಗೆ ಸರ್ಕಾರ ಉರುಳಿತು. 1999 ಅಕ್ಟೋಬರ್ನಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟ ಸರ್ಕಾರ ರಚನೆ
–2002 ಏಪ್ರಿಲ್
ಅಲಹಾಬಾದ್ ಹೈಕೋರ್ಟ್ನ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠದಿಂದ ವಿವಾದಿತ ಧಾರ್ಮಿಕ ಸ್ಥಳದ ಮಾಲೀಕತ್ವವನ್ನು ಕುರಿತ ಅರ್ಜಿಯ ವಿಚಾರಣೆ ಆರಂಭ
–2010 ಸೆಪ್ಟೆಂಬರ್ 30
2.77 ಎಕರೆ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಿ, ಎರಡನ್ನು ಹಿಂದೂಗಳಿಗೆ ಹಾಗೂ ಒಂದನ್ನು ಮುಸ್ಲಿಮರಿಗೆ ನೀಡುವ ತೀರ್ಪು ಅಲಹಾಬಾದ್ ಹೈಕೋರ್ಟ್ನಿಂದ ಪ್ರಕಟ
–2011 ಮೇ 9
ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆನೀಡಿದ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಪಾಡುವಂತೆ ಸೂಚನೆ
–2019 ಆಗಸ್ಟ್ 6
ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠದಿಂದ ಪ್ರಕರಣದ ಪ್ರತಿನಿತ್ಯ ವಿಚಾರಣೆ ಆರಂಭ
–2019 ನವೆಂಬರ್ 9
ವಿವಾದಿತ ಭೂಮಿ ಹಾಗೂ ಕಟ್ಟಡದ ಮಾಲೀಕತ್ವದ ಬಗ್ಗೆ ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳನ್ನೊಳಗೊಂ ಪೀಠ ಅಂತಿಮ ತೀರ್ಪು. ಮಂದಿರ ನಿರ್ಮಾಣಕ್ಕಾಗಿ ಭೂಮಿಯ ಮಾಲೀಕತ್ವವನ್ನು ಹಿಂದೂ ಟ್ರಸ್ಟ್ಗೆ ನೀಡಿತ್ತು. ಅಲ್ಲದೆ, ಮುಸ್ಲಿಂ ಹೋರಾಟಗಾರರಿಗೆ ಬೇರೆಡೆ ಭೂಮಿ ನೀಡಲು ಆದೇಶಿಸಿತ್ತು.
ಫೆಬ್ರುವರಿ 5, 2020 - ಟ್ರಸ್ಟ್ ಸ್ಥಾಪನೆ
ರಾಮ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು 15 ಸದಸ್ಯರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಲಾಗಿತು.
ಆಗಸ್ಟ್ 5, 2020 - ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು. ರಾಮಮಂದಿರ ನಿರ್ಮಾಣಕ್ಕೆ ಮುನ್ನುಡಿ ಬರೆದರು.
ಸೆಪ್ಟೆಂಬರ್ 30, 2020
ಬಾಬರಿ ಮಸೀದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮತ್ತಿತರನ್ನು ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ ಖುಲಾಸೆಗೊಳಿಸಿ ಲಖನೌದ ನ್ಯಾಯಾಲಯವು ಆದೇಶಿಸಿತ್ತು.
ಜನವರಿ 22, 2024 - ರಾಮನ ಪ್ರಾಣ ಪ್ರತಿಷ್ಠಾಪನೆ
ನಾಲ್ಕೈದು ದಶಕಗಳಿಂದ ಹಿಂದೂ ಹೋರಾಟಗಾರರು ಎದುರು ನೋಡುತ್ತಿದ್ದ ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರಮುಖ ವ್ಯಕ್ತಿಗಳು, ಹಿಂದೂ ಆಧ್ಯಾತ್ಮಿಕ ನಾಯಕರು ಭಾಗವಹಿಸಿದ್ದರು.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಅಯೋಧ್ಯೆಯ ರಾಮನ ವಿಗ್ರಹ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ವಿಗ್ರಹವನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೂರು ಶಿಲ್ಪಿಗಳು ವಿಗ್ರಹಗಳನ್ನು ಕೆತ್ತಿದ್ದರು. ಅದರಲ್ಲಿ ಮೈಸೂರಿನ ಶಿಲ್ಪಿಯ ವಿಗ್ರಹ ಆಯ್ಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.