ADVERTISEMENT

ದೋಣಿ ದುರಂತ: 32 ಮಂದಿ ನಾಪತ್ತೆ

ಮುಂದುವರಿದ ಶೋಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 21:21 IST
Last Updated 12 ಆಗಸ್ಟ್ 2022, 21:21 IST
ಉತ್ತರಪ್ರದೇಶದ ಬಂದಾ ಪ್ರದೇಶದಲ್ಲಿನ ಯಮುನಾ ನದಿಯಲ್ಲಿ ದೋಣಿ ದುರಂತ ಸಂಭವಿಸಿದ ಸ್ಥಳದಲ್ಲಿ ನೆರೆದಿರುವ ಜನರು –ಪಿಟಿಐ ಚಿತ್ರ
ಉತ್ತರಪ್ರದೇಶದ ಬಂದಾ ಪ್ರದೇಶದಲ್ಲಿನ ಯಮುನಾ ನದಿಯಲ್ಲಿ ದೋಣಿ ದುರಂತ ಸಂಭವಿಸಿದ ಸ್ಥಳದಲ್ಲಿ ನೆರೆದಿರುವ ಜನರು –ಪಿಟಿಐ ಚಿತ್ರ   

ಬಂದಾ: ಉತ್ತರಪ್ರದೇಶದ ಬಂದಾ ಜಿಲ್ಲೆಯ ಯಮುನಾ ನದಿಯಲ್ಲಿ ಗುರುವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ 32 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೃತಪಟ್ಟವರನ್ನು ಫುಲ್ವಾ (50), ರಜ್ರಾನಿ (45) ಹಾಗೂ ಕಿಶನ್ (7 ತಿಂಗಳು) ಎಂದು ಗುರುತಿಸಿರುವುದಾಗಿ ಬಂದಾದ ಡಿಐಜಿ ವಿಪಿನ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೃತದೇಹಗಳ ಪತ್ತೆಗಾಗಿ ಪ್ರಯಾಗ್‌ ರಾಜ್‌ನಿಂದ ಮುಳುಗುತಜ್ಞರನ್ನೂ ಕರೆಸಲಾಗಿದೆ. ದೋಣಿಯು ಮರ್ಕಾದಿಂದ ಫತೇಪುರ ಜಿಲ್ಲೆಯ ಜರೌಲಿ ಘಾಟ್‌ಗೆ ಹೋಗುತ್ತಿತ್ತು. ದೋಣಿಯಲ್ಲಿ ಒಟ್ಟು 50 ಮಂದಿ ಇದ್ದು ಜತೆಗೆ ದ್ವಿಚಕ್ರ ವಾಹನಗಳೂ ಇದ್ದವು.

ADVERTISEMENT

ಇವರಲ್ಲಿ ಬಹುತೇಕರು ರಕ್ಷಾ ಬಂಧನದ ನಿಮಿತ್ತ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಹೊರಟಿದ್ದರು. ದೋಣಿಯು ಸಮ್‌ಗರ ಹಳ್ಳಿಯ ಸಮೀಪಕ್ಕೆ ಬಂದಾಗ ಜೋರಾಗಿ ಗಾಳಿ ಬೀಸಿದ ಪರಿಣಾಮ ಮಗುಚಿಬಿದ್ದಿದ್ದು, ಹಲವರು ನೀರು ಪಾಲಾಗಿದ್ದಾರೆ. ನಾವಿಕ ಸೇರಿದಂತೆ ಇತರ 15 ಮಂದಿ ಈಜಿ ದಡ ಸೇರಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

ಮೃತಪಟ್ಟ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.