ಪಿಲಿಭಿತ್ (ಉತ್ತರ ಪ್ರದೇಶ): ಪೂರ್ವ ಪಾಕಿಸ್ತಾನದಿಂದ (ಇಂದಿನ ಬಾಂಗ್ಲಾದೇಶ) ಸ್ಥಳಾಂತರಗೊಂಡು, ಇಲ್ಲಿನ ಪಿಲಿಭಿತ್ ಜಿಲ್ಲೆಯ 25 ಹಳ್ಳಿಗಳಲ್ಲಿ ನೆಲೆಸಿರುವ 2,196 ಬಾಂಗ್ಲಾ ನಿರಾಶ್ರಿತರಿಗೆ ಭೂ ಮಾಲೀಕತ್ವದ ಹಕ್ಕು ನೀಡಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ನಿರಾಶ್ರಿತ ಕುಟುಂಬಗಳ ಬಹುದಿನಗಳ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ಕೆಲವು ಔಪಚಾರಿಕ ಕಾರ್ಯವಿಧಾನಗಳು ಮಾತ್ರ ಬಾಕಿ ಇವೆ. ಬರೋಬ್ಬರಿ 62 ವರ್ಷಗಳ ನಂತರ, ಈ ಕುಟುಂಬಗಳು ಈಗ ತಾವು ವಾಸಿಸುತ್ತಿದ್ದ ಮತ್ತು ಕೃಷಿ ಮಾಡುತ್ತಿದ್ದ ಭೂಮಿಗೆ ಕಾನೂನುಬದ್ಧ ಮಾನ್ಯತೆಯನ್ನು ಪಡೆಯಲಿದ್ದಾರೆ ಎಂದು ಪಿಲಿಭಿತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯ ಈ ನಿರ್ಧಾರಕ್ಕೆ ಪಿಲಿಭಿತ್ನ ಉಸ್ತುವಾರಿ ಸಚಿವ ಬಲದೇವ್ ಸಿಂಗ್ ಔಲಖ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ನಿರಾಶ್ರಿತ ಕುಟುಂಬಗಳಿಗೆ ವಸತಿ ಮತ್ತು ಕೃಷಿಗಾಗಿ ಸರ್ಕಾರ 1960ರಲ್ಲಿ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ಅವರಿಗೆ ಕಾನೂನುಬದ್ಧ ಮಾಲೀಕತ್ವವನ್ನು ನೀಡಿರಲಿಲ್ಲ. ಭೂಮಿಯ ಕಾನೂನುಬದ್ಧ ಮಾಲೀಕತ್ವ ಇಲ್ಲದಿದ್ದರಿಂದ ಅವರು ಸರ್ಕಾರದ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸಿಗಬಹುದಾದ ಸವಲತ್ತುಗಳಿಂದ ವಂಚಿತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.