ಲಖ್ನೋ: ಉತ್ತರ ಪ್ರದೇಶದಲ್ಲಿ ಸುನ್ನಿ ವಕ್ಫ್ ಬೋರ್ಡ್ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಲ್ಲದೆ, ಮಸೀದಿ ನಿರ್ಮಿಸಿದೆ. ಮಸೀದಿಯನ್ನು ಒಡೆದು ಹಾಕಿರುವುದಕ್ಕೆ ಬೆಂಬಲವಿದೆ ಎಂದು ಬಾರಾಬಂಕಿ ಬಿಜೆಪಿ ಸಂಸದ ಉಪೇಂದ್ರ ರಾವತ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದಿದ್ದಾರೆ.
ಮಸೀದಿ ಹೆಸರಿನಲ್ಲಿ ವಕ್ಫ್ ಬೋರ್ಡ್ ಸರ್ಕಾರಿ ಜಾಗ ಕಬಳಿಸಿದೆ, ನಂತರ ಅಕ್ರಮವಾಗಿ ನೋಂದಣಿ ಮಾಡಿಕೊಂಡಿದೆ, ಈ ಬಗ್ಗೆ ತನಿಖೆಯಾಗಬೇಕು ಎಂದು ಉಪೇಂದ್ರ ಹೇಳಿದ್ದಾರೆ.
ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನ್ಯಾಯಾಲಯದ ಆದೇಶದ ಪ್ರಕಾರ ರಾಮ್ ಸನೇಹಿ ಘಾಟ್ ಬಳಿ ನಿಮಿರ್ಸಲಾಗಿದ್ದ ಮಸೀದಿಯೊಂದನ್ನು ಬಾರಾಬಂಕಿ ಆಡಳಿತ ಸೋಮವಾರ ರಾತ್ರಿ ನೆಲಸಮಗೊಳಿಸಿತ್ತು.
ಸರ್ಕಾರಿ ಜಾಗ ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣ ಕುರಿತು ಸುನ್ನಿ ವಕ್ಫ್ ಬೋರ್ಡ್ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಬರೆದಿರುವ ಸಂಸದ, ಸುನ್ನಿ ವಕ್ಫ್ ಬೋರ್ಡ್ ಹೇಳುವಂತೆ ಮಸೀದಿ 100 ವರ್ಷ ಹಳೆಯದಾಗಿದ್ದರೆ ಅದನ್ನೇಕೆ 2018ರಲ್ಲಿ ನೋಂದಣಿ ಮಾಡಲಾಗಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ಜತೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಯಾವುದೇ ತನಿಖೆಗೆ ಸಿದ್ಧ ಎಂದು ಅಲ್ಲಿನ ವಕ್ಫ್ ಬೋರ್ಡ್ ಮುಖ್ಯಸ್ಥ ಝಾಫರ್ ಫಾರೂಕಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.