
ಕೋಲ್ಕತ್ತ: ಇಲ್ಲಿನ ಪರೇಡ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತೆಯ ಬೃಹತ್ ಪಠಣ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಎಲ್ಲೆಡೆಯೂ ಶಂಖನಾದದ ನಡುವೆ ಕೃಷ್ಣ ನಾಮಸ್ಮರಣೆ ಕೇಳಿ ಬರುತ್ತಿತ್ತು. ಸಾಧು–ಸಂತಗಣವೇ ಹರಿದುಬಂದಿತ್ತು. ಪಶ್ಚಿಮ ಬಂಗಾಳ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಸನಾತನ ಸಂಸ್ಕೃತಿ ಸಂಸದ್ ಹಮ್ಮಿಕೊಂಡಿದ್ದ ‘ಐದು ಲಕ್ಷ ಧ್ವನಿಗಳಲ್ಲಿ ಗೀತ ಪಠಣ’ ಕಾರ್ಯಕ್ರಮದ ನೇತೃತ್ವವನ್ನು ಗೀತಾ ಮನಿಶಿ ಮಹಾಮಂಡಲದ ಜ್ಞಾನಾನಂದ ಮಹಾರಾಜ್ ನೇತೃತ್ವ ವಹಿಸಿದ್ದರು. ವಿವಿಧ ಮಠಗಳ ಸ್ವಾಮೀಜಿಗಳು, ಹಿಂದೂ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಆಧ್ಯಾತ್ಮಿಕ ಮುಖಂಡರು ಭಗವದ್ಗೀತೆಯ ಪ್ರತಿಗಳನ್ನು ಹಿಡಿದು ಶ್ಲೋಕಗಳನ್ನು ಪಠಿಸಿದರು.
‘ಆಡಳಿತದ ಅಸಹಕಾರ ನಡುವೆಯೂ ಸುಮಾರು ಐದು ಲಕ್ಷ ಜನರು ಪ್ರೀತಿ ಮತ್ತು ಭಕ್ತಿಯಿಂದ ಒಂದೆಡೆ ಸೇರಿ ಭಗವದ್ಗೀತೆಯನ್ನು ಪಠಿಸಿ ಸನಾತನ ಧರ್ಮವನ್ನು ರಕ್ಷಿಸುವ ಮಹತ್ಕಾರ್ಯ ಮಾಡಿದ್ದಾರೆ. ಭಗವದ್ಗೀತೆ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. 140 ಕೋಟಿ ಭಾರತೀಯರದ್ದು’ ಎಂದು ಪ್ರದೀಪ್ತಾನಂದ ಸ್ವಾಮೀಜಿ ಹೇಳಿದರು.
2023ರ ಲೋಕಸಭೆ ಚುನಾವಣೆಗೂ ಮುನ್ನ ಇದೇ ರೀತಿ ಒಂದು ಲಕ್ಷ ಜನರಿಂದ ಭಗವದ್ಗೀತೆ ಪಠಣ’ ನಡೆದಿತ್ತು.