ಭುವನೇಶ್ವರ: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಭುವನೇಶ್ವರದ 22 ವರ್ಷದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನೊಬ್ಬನನ್ನು ಶನಿವಾರ ಬಂಧಿಸಿದ್ದಾರೆ.
ಇದೇ ಜನವರಿ 24ರಿಂದ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಖುರ್ದಾ ಜಿಲ್ಲೆಯ ತಪಾಂಗ್ನಲ್ಲಿರುವ ಪಾಳುಬಿದ್ದ ಕಲ್ಲು ಗಣಿಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಪೊಲೀಸರು ದೇಬಾಶಿಶ್ ಬಿಸೋಯಿ (26) ಎಂದು ಗುರುತಿಸಿದ್ದು, ಭುವನೇಶ್ವರದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು.
ನಿರುಪಮಾ ಪರಿದಾ ಭುವನೇಶ್ವರದ ಭರತ್ಪುರ ಪ್ರದೇಶದ ಉದ್ಯಮಿಯೊಬ್ಬರ ಮನೆಯಲ್ಲಿ ಕೇರ್ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ಜನವರಿ 27ರಂದು ಪೊಲೀಸ್ ಠಾಣೆಯಲ್ಲಿ ಈಕೆ ನಾಪತ್ತೆಯಾಗಿದ್ದಾರೆಂದು ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿ ಜತೆ ಪ್ರೀತಿಯಲ್ಲಿದ್ದ ದೇಬಾಶಿಶ್, ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಅನುಮಾನಿಸುತ್ತಿದ್ದನು. ಇದೇ ಕಾರಣದಿಂದಾಗಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜನವರಿ 24ರಂದು ಕೊಲೆ ಮಾಡಿ, ಎಸೆದು ಬಂದಿದ್ದನು ಎಂದು ತಿಳಿದು ಬಂದಿತ್ತು.
ಆರಂಭದಲ್ಲಿ ಆಕೆಯ ಮೃತದೇಹದ ಹುಡುಕಾಟವು ಸವಾಲಿನ ಕೆಲಸವಾಗಿತ್ತು. ಯಾವುದೇ ಸುಳಿವು ಸಿಗದ ಕಾರಣ ಪ್ರಕರಣ ಭೇದಿಸುವುದು ಕಷ್ಡಕರವಾಗಿತ್ತು ಎಂದು ಭುವನೇಶ್ವರ ಡಿಸಿಪಿ ಜಗಮೋಹನ್ ಮೀನಾ ಹೇಳಿದ್ದಾರೆ.
ಡಿಜಿಟಲ್ ಪುರಾವೆಗಳ ಸಂಪೂರ್ಣ ತನಿಖೆ ಮತ್ತು ವಿಶ್ಲೇಷಣೆಯ ನಂತರ ದೇಬಾಶಿಶ್ ಬಂಧಿಸಲಾಯಿತು. ಆಕೆಯ ಅಸ್ಥಿಪಂಜರವನ್ನು ಹೊರತೆಗೆಯಲಾಗಿದೆ ಎಂದು ಜಗಮೋಹನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.