ADVERTISEMENT

ಉತ್ತರ ಪ್ರದೇಶ ಚುನಾವಣೆ: ಸೋನಿಯಾ ಭೇಟಿಯಾಗಲಿದ್ದಾರೆ ಭೂಪೇಶ್‌ ಬಘೆಲ್‌

ಐಎಎನ್ಎಸ್
Published 12 ನವೆಂಬರ್ 2021, 6:06 IST
Last Updated 12 ನವೆಂಬರ್ 2021, 6:06 IST
ಭೂಪೇಶ್‌ ಬಘೆಲ್‌, ಸೋನಿಯಾ ಗಾಂಧಿ ಹಾಗೂ ಸಚಿನ್ ಪೈಲಟ್ (ಐಎಎನ್‌ಎಸ್ & ಪಿಟಿಐ ಚಿತ್ರಗಳು)
ಭೂಪೇಶ್‌ ಬಘೆಲ್‌, ಸೋನಿಯಾ ಗಾಂಧಿ ಹಾಗೂ ಸಚಿನ್ ಪೈಲಟ್ (ಐಎಎನ್‌ಎಸ್ & ಪಿಟಿಐ ಚಿತ್ರಗಳು)   

ನವದೆಹಲಿ: ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಇಂದು (ಶುಕ್ರವಾರ) ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಘೆಲ್ ಅವರು ಆಂತರಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಪೈಲಟ್ ಅವರು ರಾಜ್ಯದಲ್ಲಿ ಕೆಲವು ಬದಲಾವಣೆ ಬಯಸಿ ಅಧ್ಯಕ್ಷೆ ಜತೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ವೀಕ್ಷಕರಾಗಿರುವ ಕಾರಣ, ಚುನಾವಣೆ ಕುರಿತು ಚರ್ಚಿಸಲು ಬಘೆಲ್ ಅವರು ಪಕ್ಷದ ಅಧ್ಯಕ್ಷೆ ಅವರನ್ನು ಭೇಟಿಯಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಗುರುವಾರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ರಾಜಸ್ಥಾನ ಸಚಿವ ಸಂಪುಟ ಪುನರ್‌ರಚನೆ ಮಾಡುವ ಸಾಧ್ಯತೆಗಳಿದ್ದು, ಇದೇ ಕಾರಣಕ್ಕೆ ಗೆಹಲೋತ್ ಅವರು ಪಕ್ಷದ ವರಿಷ್ಠರನ್ನು ಭೇಟಿಮಾಡಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಪೈಲಟ್ ಅವರೂ ಸೋನಿಯಾ ಭೇಟಿಗೆ ಮುಂದಾಗಿದ್ದಾರೆ.

ಪೈಲಟ್ ಅವರು ಗುರುವಾರ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದರು.

ಸೋನಿಯಾ ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ಗೆಹಲೋತ್, ಎಲ್ಲ ವಿಚಾರಗಳನ್ನೂ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಪಕ್ಷದ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.