
ಲಾರೆನ್ಸ್ ಬಿಷ್ಟೋಯಿ
ಕೃಪೆ: ಪಿಟಿಐ
ಮುಂಬೈ: ಭೋಜಪುರಿ ನಟ ಪವನ್ ಸಿಂಗ್ ಅವರಿಗೆ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಅಪರಿಚಿತರಿಂದ ಕೊಲೆ ಬೆದರಿಕೆ ಎದುರಾಗಿದೆ.
ಈ ಸಂಬಂಧ ಸಿಂಗ್ ಅವರ ಮ್ಯಾನೇಜರ್ ಮುಂಬೈ ಪೊಲೀಸ್ ಠಾಣೆಗೆ ಇಂದು (ಸೋಮವಾರ) ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಯು ಲಾರೆನ್ಸ್ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡು ಶನಿವಾರದಿಂದ ಕರೆ ಹಾಗೂ ಮೆಸೇಜ್ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ದೀಕ್ಷಿತ್ ಗೆದಂ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆದರಿಕೆಗೆ ಕಾರಣವೇನು?
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಪವನ್ ಸಿಂಗ್ ವೇದಿಕೆ ಅಥವಾ ತೆರೆ ಹಂಚಿಕೊಳ್ಳಬಾರದು. ತಪ್ಪಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಎಚ್ಚರಿಕೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪವನ್ ಸಿಂಗ್ ಅವರ ತಂಡದ ಮತ್ತೊಬ್ಬರಿಗೂ ಇದೇ ರೀತಿಯ ಕರೆಗಳು ಬಂದಿವೆ. ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವನ್ ಅವರು, ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದಾರೆ.
ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆ ಆರೊಪಿ ಲಾರೆನ್ಸ್ ಬಿಷ್ಟೋಯಿ, ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಗುಜರಾತ್ನ ಸಾಬರಮತಿ ಜೈಲಿನಲ್ಲಿದ್ದಾನೆ.
ಸಲ್ಮಾನ್ ವಿರುದ್ಧ ಹಗೆ ಏಕೆ?
1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ಸಂದರ್ಭ ರಾಜಸ್ಥಾನದ ಹಳ್ಳಿಯೊಂದರಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದೆ.
ಬಿಷ್ಣೋಯಿ ಸಮುದಾಯವು ಕೃಷ್ಣಮೃಗಗಳನ್ನು ಅತ್ಯಂತ ಪವಿತ್ರವೆಂದು ಎಂದು ಭಾವಿಸುತ್ತದೆ. ಇದೇ ಕಾರಣಕ್ಕೆ ಸಲ್ಮಾನ್ ಅವರನ್ನು ಬಿಷ್ಣೋಯಿ ಹಗೆ ಸಾಧಿಸುತ್ತಿದೆ ಎನ್ನಲಾಗಿದೆ.
2024ರ ಏಪ್ರಿಲ್ನಲ್ಲಿ ಸಲ್ಮಾನ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು.
ಸಲ್ಮಾನ್ ಜೊತೆ ಉತ್ತಮ ಒಡನಾಟ ಹೊಂದಿದ್ದ ಮಹಾರಾಷ್ಟ್ರದ ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಅವರನ್ನು ಅದೇ ವರ್ಷ ಅಕ್ಟೋಬರ್ನಲ್ಲಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯಿ ಆದೇಶದಂತೆ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.