
ತೇಜಸ್ವಿ ಯಾದವ್
(ಪಿಟಿಐ ಚಿತ್ರ)
ಪಟ್ನಾ: 'ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 'ಇಂಡಿಯಾ' ಮೈತ್ರಿಕೂಟ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು' ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇಂದು (ಬುಧವಾರ) ಭರವಸೆ ನೀಡಿದ್ದಾರೆ.
'ಬಿಹಾರ ಜನತೆಗಾಗಿ ನಮ್ಮ ಸಂಕಲ್ಪ ಹಾಗೂ ಬದ್ಧತೆಯನ್ನು ಪ್ರಣಾಳಿಕೆಯಲ್ಲಿ ಮಂಡಿಸಲಾಗಿದೆ. ಇದು ನಮ್ಮ 'ಪ್ರಾಣ ಪತ್ರ' ಆಗಿದೆ. ಮಹಾಘಟಬಂಧನ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು' ಎಂದು 'ಇಂಡಿಯಾ' ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ತೇಜಸ್ವಿ ತಿಳಿಸಿದ್ದಾರೆ.
'ಪ್ರತಿ ಮನೆಯ ಒಬ್ಬ ಸದಸ್ಯನಿಗೆ ಸರ್ಕಾರಿ ಹುದ್ದೆ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ, ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ ಕಾರ್ಮಿಕರ ಖಾಯಂ ಮತ್ತು ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಉದ್ಯೋಗಿಗಳನ್ನು ತವರು ಜಿಲ್ಲೆಯ 70 ಕಿ.ಮೀ. ವ್ಯಾಪ್ತಿಯಲ್ಲಿ ವರ್ಗಾವಣೆ ಅಥವಾ ನಿಯೋಜನೆ ಮಾಡಲು ಸ್ಥಿರವಾದ ನೀತಿಯನ್ನು ರೂಪಿಸಲಾಗುವುದು' ಎಂದು ಅವರು ಹೇಳಿದ್ದಾರೆ.
'ರಾಜ್ಯದ ಎಲ್ಲ ವಿಭಾಗಗಳಲ್ಲಿ ಪತ್ರಕರ್ತರಿಗಾಗಿ ಪ್ಲೆಸ್ ಕ್ಲಬ್ಗಳನ್ನು ತೆರೆಯಲಾಗುವುದು' ಎಂದು ಅವರು ತಿಳಿಸಿದ್ದಾರೆ.
ಈವರೆಗೆ ಪ್ರಣಾಳಿಕೆ ಬಿಡುಗಡೆ ಮಾಡದಿರುವುದಕ್ಕಾಗಿ ಎನ್ಡಿಎ ಮೈತ್ರಿಯ ವಿರುದ್ಧವೂ ತೇಜಸ್ವಿ ವಾಗ್ದಾಳಿ ನಡೆಸಿದ್ದಾರೆ.