ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಆಡಾಳಿತಾರೂಢ ಎನ್ಡಿಎ ಸೀಟು ಹಂಚಿಕೆ ಪ್ರಕಟಿಸಿದ್ದು, ಮೈತ್ರಿಕೂಟದಲ್ಲಿನ ಸಣ್ಣ ಮಿತ್ರಪಕ್ಷಗಳು ಅಪಸ್ವರ ತೆಗೆದಿವೆ.
‘ಮೈತ್ರಿಕೂಟದ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ. ಆದರೆ ನಮಗೆ ಕೇವಲ ಆರು ಸ್ಥಾನ ನೀಡುವ ಮೂಲಕ ನಮ್ಮ ಸಾಮರ್ಥ್ಯವನ್ನು ಪರಿಗಣಿಸಿಲ್ಲ. ಇದು ಚುನಾವಣೆಯಲ್ಲಿ ಮುಳುವಾಗಬಹುದು’ ಎಂದು ಹಿಂದೂಸ್ತಾನಿ ಅವಾಮ್ ಮೋರ್ಚಾ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.
‘ನಾನು ನಿಮ್ಮ ಕ್ಷಮೆ ಕೋರುವೆ. ನಮಗೆ ಸಿಕ್ಕಿರುವ ಕ್ಷೇತ್ರಗಳ ಸಂಖ್ಯೆ ನಿರೀಕ್ಷೆಯಂತಿಲ್ಲ. ಈ ನಿರ್ಧಾರವು ನಮ್ಮ ಪಕ್ಷದಿಂದ ಅಭ್ಯರ್ಥಿಗಳಾಗಲು ಬಯಸಿದ್ದವರಿಗೆ ನೋವುಂಟು ಮಾಡಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿರುವೆ’ ಎಂದು ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷದ ವರಿಷ್ಠ ಉಪೇಂದ್ರ ಕುಶ್ವಾಹ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.
‘ಪಕ್ಷದ ಮಿತಿಯನ್ನು ನೀವೆಲ್ಲರೂ ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸಿರುವೆ. ಈ ನಿರ್ಧಾರ ಎಷ್ಟು ಸೂಕ್ತ ಅಥವಾ ಸೂಕ್ತವಲ್ಲ ಎಂಬುದನ್ನು ನೀವೇ ಅರಿತುಕೊಳ್ಳುತ್ತೀರಿ. ಉಳಿದದ್ದನ್ನು ಸಮಯವೇ ನಿರ್ಧರಿಸಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.