ಕೊಲ್ಕತ್ತ: ಲೋಕಸಭಾ ಚುನಾವಣೆಯಲ್ಲಿ ಮೋಸ ಮಾಡಿ ಬಿಜೆಪಿ ಗೆದ್ದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೊಲ್ಕತ್ತದಲ್ಲಿ ಭಾನುವಾರ ಆಯೋಜಿಸಿದ್ದ ಮೆಗಾರ್ಯಾಲಿಯಲ್ಲಿ ಮಮತಾ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಇವಿಎಂ, ಸಿಆರ್ಪಿಎಫ್ ಮತ್ತು ಚುನಾವಣಾ ಆಯೋಗ ಬಳಸಿಮೋಸಮಾಡಿ ಬಿಜೆಪಿ ಲೋಕಸಭಾ ಚುನಾವಣೆ ಗೆದ್ದಿದೆ.ಅವರಿಗೆ ಸಿಕ್ಕಿದ್ದು ಕೇವಲ18 ಸೀಟು, ಇಷ್ಟುಸೀಟು ಸಿಕ್ಕಿದ್ದಕ್ಕೆ ಅವರು ನಮ್ಮ ಪಕ್ಷದ ಕಚೇರಿ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಮತಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014ರಲ್ಲಿ ಗೆಲುವು ಸಾಧಿಸಿದ ಸೀಟುಗಳ ಒಂಭತ್ತು ಪಟ್ಟು ಸೀಟು ಗೆದ್ದುಕೊಂಡಿದೆ.ಇತ್ತ ಟಿಎಂಸಿ 2014ರಲ್ಲಿ 34 ಸೀಟು ಗೆದ್ದಿದ್ದು 2019ರಲ್ಲಿ 22 ಸೀಟು ಗೆದ್ದುಕೊಂಡಿತ್ತು.
ಹುತಾತ್ಮರ ದಿನದ ಅಂಗವಾಗಿ ಕೊಲ್ಕತ್ತದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬಿಜೆಪಿ ನೇತೃತ್ವದ ಸರ್ಕಾರ ರ್ಯಾಲಿಗೆ ಭಂಗ ತರಲು ಯತ್ನಿಸುತ್ತಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಮತಪತ್ರ ಬಳಸಿ ನಡೆಸುವಂತೆ ತಾನು ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದ್ದೇನೆ ಎಂದು ಮಮತಾ ಹೇಳಿದ್ದಾರೆ.
1993, ಜುಲೈ 21ರಂದು ಪೊಲೀಸರ ಗುಂಡೇಟಿಗೆ 13 ಯುವ ಕಾಂಗ್ರೆಸ್ಸಿಗರು ಬಲಿಯಾಗಿದ್ದರು.ಆವಾಗ ಮಮತಾ ಬ್ಯಾನರ್ಜಿ ಯುವ ಕಾಂಗ್ರೆಸ್ ನಾಯಕಿಯಾಗಿದ್ದರು. ಪ್ರತಿ ವರ್ಷವೂ ಪಶ್ಚಿಮ ಬಂಗಾಳದಲ್ಲಿ ಜುಲೈ 21ರಂದು ಹುತಾತ್ಮರ ದಿನಾಚರಣೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.