ನೈನಾರ್ ನಾಗೇಂದ್ರನ್
(X/@NainarBJP)
ಚೆನ್ನೈ: 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ–ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯ್ಯುವುದೇ ನಮ್ಮ ಮೈತ್ರಿಯ ಅಂತಿಮ ಗುರಿ ಎಂದು ತಮಿಳುನಾಡು ಬಿಜೆಪಿ ಘಟಕದ ನೂತನ ಅಧ್ಯಕ್ಷ ನೈನಾರ್ ನಾಗೇಂದ್ರನ್ ಗುಡುಗಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ (ಎಐಎಡಿಎಂಕೆ) ಹಾಗೂ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಒಂದುಗೂಡಿದ ಮೇಲೆ ತಮಿಳುನಾಡಿನಲ್ಲಿ ಡಿಎಂಕೆ ಗಂಟುಮೂಟೆ ಕಟ್ಟುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಅವರು ಹೇಳಿದ್ದಾರೆ.
2026 ರಲ್ಲಿ ಜನರು ಡಿಎಂಕೆ ವಿರುದ್ಧ ನೀಡುವ ತೀರ್ಪನ್ನು ದೇವರೇ ಬಂದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನನ್ನ ಮೇಲೆ ಭರವಸೆ ಇಟ್ಟು ನನ್ನ ಕೈಗೆ ರಾಜ್ಯ ಬಿಜೆಪಿ ಮುನ್ನಡೆಸುವ ಹೊಣೆ ನೀಡಿರುವ ಬಿಜೆಪಿ ವರಿಷ್ಠರಿಗೆ ನಾನು ತಲೆಭಾಗುತ್ತೇನೆ. ಅವರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು 2026ರ ಚುನಾವಣೆಯ ಫಲಿತಾಂಶದೊಂದಿಗೆ ಉಳಿಸಿಕೊಂಡು ತೋರಿಸುತ್ತೇನೆ ಎಂದಿದ್ದಾರೆ.
ಎಐಎಡಿಎಂಕೆ–ಬಿಜೆಪಿ ಎಲ್ಲ ತರಹದಿಂದ ಒಗ್ಗಟ್ಟಾಗಿ ಹೋರಾಡಲಿದೆ. ನಮ್ಮ ಮೈತ್ರಿ ತಾಳೆ ಆಗುವುದಿಲ್ಲ ಎಂದಿರುವ ಡಿಎಂಕೆ ನಾಯಕರು ಮುಂದೆ ಎಲ್ಲಿರುತ್ತಾರೆ ನೋಡೋಣ ಎಂದು ನೈನಾರ್ ನಾಗೇಂದ್ರನ್ ಅವರು ಡಿಎಂಕೆ ವ್ಯಂಗ್ಯಕ್ಕೆ ತಿರುಗೇಟು ನೀಡಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಎದುರಿಸಲು ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಹಾಗೂ ಬಿಜೆಪಿ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿವೆ. ಇದಕ್ಕಾಗಿ ಕೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆ.ಅಣ್ಣಾಮಲೈ ಅವರ ರಾಜೀನಾಮೆಯನ್ನು ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.