ಕಾನ್ಪುರ: ಉತ್ತರ ಪ್ರದೇಶದ ದೇಹತ್ ಜಿಲ್ಲೆಯ ಪುಖ್ರಾಯನ್ನಲ್ಲಿ ಹಲವು ಮಹಿಳೆಯರಿದ್ದ ಗುಂಪೊಂದು ನಡೆಸಿದ ದಾಳಿ ವೇಳೆ ಗಾಯಗೊಂಡಿದ್ದ ಬಿಜೆಪಿ ಮುಖಂಡ ರಾಜೇಶ್ ತಿವಾರಿ ಎನ್ನುವವರ ಪುತ್ರ ಮೃತಪಟ್ಟಿದ್ದಾರೆ.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆಗಿರುವ ತಿವಾರಿ ಅವರ ಪುತ್ರ ಅಂಬ್ರೇಶ್ ಎ.ಕೆ.ಎ. ಮುನಿ ಶನಿವಾರ ಸಂಜೆ ಸಘನ್ ಕ್ಷೇತ್ರ ವಿಕಾಸ ಸಮಿತಿಗೆ ತರಳಲು ತಮ್ಮ ಸ್ನೇಹಿತನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಕೆಲವು ಸ್ಥಳೀಯರು ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಿ ಸಮಿತಿಯ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ.
ಅವರನ್ನು (ಸ್ಥಳೀಯರನ್ನು) ತಡೆಯಲು ಮುಂದಾದಾಗ ಗಲಾಟೆ ನಡೆದಿದ್ದು, ಸ್ಥಳೀಯರ ಗುಂಪು ಅಂಬ್ರೇಶ್ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ದಾಳಿ ಮಾಡಿದೆ. ಇದರಿಂದಾಗಿ ಅಂಬ್ರೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲೇ ಇದ್ದ ಅಂಬ್ರೇಶ್ ಸ್ನೇಹಿತ ಅಲ್ಲಿಂದ ತಪ್ಪಿಸಿಕೊಂಡು ಆತನ (ಅಂಬ್ರೇಶ್) ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಂಬ್ರೇಶ್ ಕುಟುಂಬಸ್ಥರು ಆತನನ್ನು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಕುಟುಂಬಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಭಾತ್ ಕುಮಾರ್ ಸಿಂಗ್ ಅವರು ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.