ADVERTISEMENT

ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ: ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2022, 12:56 IST
Last Updated 5 ಆಗಸ್ಟ್ 2022, 12:56 IST
ಬಿಜೆಪಿ ನಾಯಕ ರವಿ ಶಂಕರ್‌ ಪ್ರಸಾದ್‌
ಬಿಜೆಪಿ ನಾಯಕ ರವಿ ಶಂಕರ್‌ ಪ್ರಸಾದ್‌   

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೀಕೆಗೆ ಬಿಜೆಪಿ ನಾಯಕ ರವಿ ಶಂಕರ್‌ ಪ್ರಸಾದ್‌ ತಿರುಗೇಟು ನೀಡಿದ್ದಾರೆ.

ತಮ್ಮ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷವು ನಿರಂತರವಾಗಿ ಚುನಾವಣೆಗಳನ್ನು ಸೋಲುತ್ತಿರುವುದರಿಂದ ಮತ್ತು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆಯಿಂದ ರಾಹುಲ್‌ ಹತಾಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳನ್ನು ದೂಷಣೆ ಮಾಡುತ್ತಿದ್ದಾರೆ ಎಂದು ಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್‌ ಗಾಂಧಿ ಅವರು ನಾಚಿಕೆಗೇಡಿನ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಮುಚ್ಚಿಕೊಳ್ಳಲು ಸಂವಿಧಾನಿಕ ಸಂಸ್ಥೆಗಳನ್ನು ತುಚ್ಛವಾಗಿಸುವುದನ್ನು ನಿಲ್ಲಿಸಬೇಕು. ಅವರ ಮಾತನ್ನು ಜನರು ಕೇಳದಿದ್ದರೆ ಅದಕ್ಕೆ ಬಿಜೆಪಿಯನ್ನೇಕೆ ದೂರುತ್ತಿದ್ದಾರೆ? ಅವರನ್ನು ಜನ ನಿರಂತರವಾಗಿ ತಿರಸ್ಕರಿಸುತ್ತಿರುವಾಗ ಪ್ರಜಾಪ್ರಭುತ್ವವನ್ನು ಏಕೆ ದೂರುತ್ತಿದ್ದಾರೆ ಎಂದು ರಾಹುಲ್‌ ವಿರುದ್ಧ ರವಿ ಶಂಕರ್‌ ಪ್ರಸಾದ್‌ ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಜನರು ಸರ್ವಾಧಿಕಾರವನ್ನು ಅನುಭವಿಸಿದ್ದರೆ ಅದು ತುರ್ತುಪರಿಸ್ಥಿತಿಯ ದಿನಗಳಲ್ಲಾಗಿದೆ. ಪ್ರತಿಪಕ್ಷ ನಾಯಕರು, ಮಾಧ್ಯಮಗಳ ಸಂಪಾದಕರು ಸೇರಿದಂತೆ ಹಲವರನ್ನು ಜೈಲಿಗೆ ಕಳುಹಿಸಲಾಗಿತ್ತು. ನ್ಯಾಯಮೂರ್ತಿಗಳು ಅಸಹಾಯಕರಾಗಿದ್ದರು. ಎಲ್ಲರ ಮೇಲೆ ನಿಯಂತ್ರಣಗಳನ್ನು ಹೇರಲಾಗಿತ್ತು ಎಂದು ರವಿ ಶಂಕರ್‌ ದೂರಿದ್ದಾರೆ.

ಕಾಂಗ್ರೆಸ್‌ನಲ್ಲಿ ಪಕ್ಷದೊಳಗೆ ಪ್ರಜಾಪ್ರಭುತ್ವ ಎಲ್ಲಿದೆ? 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲ ರೀತಿಯ ಆರೋಪಗಳನ್ನು ರಾಹುಲ್‌ ಗಾಂಧಿ ಮಾಡಿದ್ದಾರೆ. ಆದರೆ ಮೋದಿ ಅತಿದೊಡ್ಡ ಬೆಂಬಲದೊಂದಿಗೆ ಆಯ್ಕೆಯಾದರು ಎಂದು ರವಿ ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.