ನವದೆಹಲಿ: ಅತ್ಯಾಚಾರ ಪ್ರಕರರಣ ಸಂಬಂಧ ಸಚಿವ ಧನಂಜಯ್ ಮುಂಡೆ ವಿರುದ್ಧ ಮಾತನಾಡಿದ್ದರಿಂದಾಗಿ ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಆರು ನಾಯಕರಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಿರೀಟ್, ‘ಧನಂಜಯ್ ಮುಂಡೆ ವಿರುದ್ಧ ಮಾತನಾಡಿದರೆ ಶೂಟ್ ಮಾಡುತ್ತೇವೆ ಎಂದು ಎನ್ಸಿಪಿಯ ಆರು ನಾಯಕರು ಬೆದರಿಕೆಯೊಡ್ಡಿದ್ದಾರೆ. ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಧನಂಜಯ್ ಮುಂಡೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಮುಂಡೆ ಅವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ತಮ್ಮ ಮಕ್ಕಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ವಾರದ ಹಿಂದಷ್ಟೇ ಮಹಿಳೆಯೊಬ್ಬರು ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು ಮತ್ತು ಮುಂಬೈ ಪೊಲೀಸರು ತಮ್ಮ ದೂರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದಿದ್ದರು.
ಆದರೆಈ ಆರೋಪವನ್ನು ತಿರಸ್ಕರಿಸಿರುವ ಸಚಿವ, ದೂರು ನೀಡಿರುವ ಮಹಿಳೆ ಹಾಗೂ ಆಕೆಯ ಸಹೋದರಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ದೂರುದಾರ ಮಹಿಳೆಯ ಸಹೋದರಿ ಜೊತೆ ನನಗೆ ಸಂಬಂಧವಿತ್ತು. ಇಬ್ಬರು ಮಕ್ಕಳೂ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
‘2006ರಿಂದ ನನ್ನ ಮೇಲೆ ನಿರಂತರವಾಗಿ ಧನಂಜಯ್ ಮುಂಡೆ ಅತ್ಯಾಚಾರವೆಸಗುತ್ತಿದ್ದಾರೆ. ಈ ಕುರಿತು ಓಶಿವಾರ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರು ಸ್ವೀಕರಿಸಲಿಲ್ಲ’ ಎಂದು 37 ವರ್ಷದ ಮಹಿಳೆ ಮುಂಬೈ ಪೊಲೀಸ್ ಆಯುಕ್ತರಿಗೆ ಜ.10ರಂದು ಪತ್ರ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.