ADVERTISEMENT

ನಿರುದ್ಯೋಗಿಗೆ ತಿಂಗಳಿಗೆ ₹5 ಸಾವಿರ: ಬಿಜೆಪಿ ಪ್ರಣಾಳಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 19:42 IST
Last Updated 27 ನವೆಂಬರ್ 2018, 19:42 IST
   

ಜೈಪುರ:21 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅರ್ಹ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹5 ಸಾವಿರ ನಿರುದ್ಯೋಗ ಭತ್ಯೆ ನೀಡುವುದಾಗಿ ರಾಜಸ್ಥಾನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಪ್ರಣಾಳಿಕೆ ಹೇಳಿದೆ.

ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷದಲ್ಲಿ ಖಾಸಗಿ ಕ್ಷೇತ್ರದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿಯೂ ಭರವಸೆ ನೀಡಿದೆ.

ಪ್ರತಿ ವರ್ಷ 30 ಸಾವಿರದಂತೆ ಐದು ವರ್ಷದಲ್ಲಿ 1.50 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಮಂಗಳವಾರ ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆ ಆಶ್ವಾಸನೆ ಕೊಟ್ಟಿದೆ.

ADVERTISEMENT

ಮುಖ್ಯಮಂತ್ರಿ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ ಮತ್ತು ಪ್ರಕಾಶ್‌ ಜಾವಡೇಕರ್‌ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಅಕ್ರಮ ವ್ಯವಹಾರ, ಅನೈತಿಕ ಮಾರ್ಗ ಬಣ್ಣಿಸಲು ಬಳಸಲಾಗುತ್ತಿದ್ದ ‘ಗೋರಕ್‌ ದಂಡಾ’ ಪದ ನಿಷೇಧಿಸಲಾಗುವುದು. ಪದ ಬಳಕೆ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು.

ನಾಥ ಪಂಥದ ಗುರು ಗೋರಕನಾಥ್‌ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ಎಂದು ಪ್ರಣಾಳಿಕೆ ಹೇಳಿದೆ.

ಈಡೇರಿಸಲಾಗದ ಸುಳ್ಳು ಭರವಸೆಗಳ ಮೂಟೆ ಎಂದು ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಅವರು ಬಿಜೆಪಿ ಪ್ರಣಾಳಿಕೆಯನ್ನು ಲೇವಡಿ ಮಾಡಿದ್ದಾರೆ.

ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ₹15 ಲಕ್ಷದಂತೆ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ ರೀತಿಯಲ್ಲಿಯೇ ₹5 ಸಾವಿರ ನಿರುದ್ಯೋಗ ಭತ್ಯೆ ಕೂಡಾ ಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಣಾಳಿಕೆಯಲ್ಲಿರುವ ಶೇ 50ರಷ್ಟು ಆಶ್ವಾಸನೆಗಳು ಹಳೆಯ ಭರವಸೆಗಳು. ಅವುಗಳಲ್ಲಿ ಹೊಸದೇನೂ ಇಲ್ಲ. ಬಿಜೆಪಿ ಮತ್ತೊಮ್ಮೆ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.