ADVERTISEMENT

ಕೊರೊನಾದಿಂದ ಮಗನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ಶಾಸಕನ ಆರೋಪ

ಏಜೆನ್ಸೀಸ್
Published 29 ಮೇ 2021, 7:02 IST
Last Updated 29 ಮೇ 2021, 7:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹರ್ದೊಯ್ (ಉ. ಪ್ರದೇಶ): ಕೊರೊನಾವೈರಸ್‌ನಿಂದ ಪುತ್ರ ಮೃತಪಟ್ಟಿರುವುದಕ್ಕೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ದೂರಿದ್ದಾರೆ. ಅಲ್ಲದೆ ಕಳೆದೊಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ನೀಡಿದರೂ, ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಹರ್ದೊಯ್ ಜಿಲ್ಲೆಯ ಸಂಡಿಲಾದ ಬಿಜೆಪಿ ಶಾಸಕ ರಾಜ್‌ಕುಮಾರ್ ಅಗರವಾಲ್ ಅವರ ಪುತ್ರ ಆಶಿಶ್, ಕೋವಿಡ್ ಸೋಂಕು ತಗುಲಿ ಏಪ್ರಿಲ್ 26ರಂದು ಕಾಕೋರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಏಪ್ರಿಲ್ 26ರ ಬೆಳಗ್ಗೆ ಆಮ್ಲಜನಕ ಮಟ್ಟವು 94 ಆಗಿತ್ತು. ಅವರು ಆಹಾರ ಸೇವಿಸುತ್ತಿದ್ದರು ಮತ್ತು ನಮ್ಮೊಂದಿಗೆ ನಿಯಮಿತವಾಗಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಂಜೆಯ ವೇಳೆಗೆ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದೆ ಎಂದು ವೈದ್ಯರು ಹೇಳಿದರು. ನಾವು ಹೊರಗಿನಿಂದ ಆಮ್ಲಜನಕ ಸಿಲಿಂಡರ್ ಅನ್ನು ವ್ಯವಸ್ಥೆಗೊಳಿಸಿದೆವು. ಆದರೆ ವೈದ್ಯರು ಆಮ್ಲಜನಕವನ್ನು ರೋಗಿಗೆ ಒದಗಿಸಲು ಅನುಮತಿಸಲಿಲ್ಲ. ಇದರಿಂದಾಗಿ ನಿಧನರಾದರು ಎಂದು ಆರೋಪಿಸಿದ್ದಾರೆ.

ADVERTISEMENT

ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗ ಮೃತಪಟ್ಟಿದ್ದಾನೆ. ಮಗನಿಗೆ ನ್ಯಾಯ ಒದಗಿಸುವುದಕ್ಕಾಗಿ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಆ ದಿನ ಆಸ್ಪತ್ರೆಯಲ್ಲಿ ಏಳು ಮಂದಿ ಮತಪಟ್ಟಿದ್ದಾರೆ. ನಾನು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೆ. ಆದರೂ ದೂರು ದಾಖಲಿಸಲಿಲ್ಲ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಬೇಕು ಮತ್ತು ನನ್ನ ಮಗನ ಸಾವಿಗೆ ಯಾರು ಕಾರಣ ಎಂಬುದನ್ನು ಕಂಡುಹಿಡಿಯಬೇಕು. ತಪ್ಪಿತ್ತಸ್ಥ ವೈದ್ಯರಿಗೆ ಶಿಕ್ಷೆಯಾಗಬೇಕು ಎಂಬುದು ನನ್ನ ಬೇಡಿಕೆಯಾಗಿದೆ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.