ಪುರುಲಿಯಾ (ಪಶ್ಚಿಮಬಂಗಾಳ): ‘ಬಿಜೆಪಿಯು ಮಾವೋವಾದಿಗಳಿಗಿಂತ ಅಪಾಯಕಾರಿ’ ಎಂದು ಟೀಕಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ಬಿಜೆಪಿ ನೀಡುತ್ತದೆ’ ಎಂದು ಮಂಗಳವಾರ ಆರೋಪಿಸಿದರು.
‘ರಾಜಕೀಯ ಎನ್ನುವುದು ಹೊಣೆಗಾರಿಕೆಯಿಂದ ಕೂಡಿದ ಸಿದ್ಧಾಂತ. ಇದನ್ನು ದಿನವೂ ಬಟ್ಟೆ ಬದಲಾಯಿಸಿದಂತೆ ಬದಲಾಯಿಸಲು ಸಾಧ್ಯವಿಲ್ಲ. ಯಾರು ಬಿಜೆಪಿಯನ್ನು ಸೇರಲು ಬಯಸುತ್ತೀರೊ ಅವರು ತೆರಳಬಹುದು. ಆದರೆ ನಾವು ಆ ಪಕ್ಷದ ಮುಂದೆ ಎಂದಿಗೂ ತಲೆ ತಗ್ಗಿಸುವುದಿಲ್ಲ’ ಎಂದು ಪುರುಲಿಯಾದಲ್ಲಿ ನಡೆದ ರ್ಯಾಲಿ ವೇಳೆ ಮಮತಾ ಬ್ಯಾನರ್ಜಿ ಹೇಳಿದರು.
ರಾಜ್ಯದಲ್ಲಿ ಮುಂಬರುವ ಏಪ್ರಿಲ್–ಮೇನಲ್ಲಿ ವಿಧಾನಸಭೆ ಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಹಲವು ಟಿಎಂಸಿ ನಾಯಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಆಗುತ್ತಿರುವುದರ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
‘ಜಂಗಲ್ಮಹಲ್ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿ ಜನರನ್ನು ಬಿಜೆಪಿ ನಾಯಕರು ದಾರಿತಪ್ಪಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ನೀಡಿದ್ದ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕಡೆ ತಲೆ ಹಾಕಿಲ್ಲ’ ಎಂದರು. 2019ರ ಲೋಕಸಭೆ ಚುನಾವಣೆಯಲ್ಲಿ ಪುರುಲಿಯಾ ಸೇರಿದಂತೆ ಜಂಗಲ್ಮಹಲ್ ಪ್ರದೇಶದಲ್ಲಿನ ಎಲ್ಲ ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.