ADVERTISEMENT

ಬುರ್ಕಾಧಾರಿ ಮತದಾರರನ್ನು ಪರಿಶೀಲಿಸಬೇಕು; ಇಲ್ಲವೇ ಮರು ಮತದಾನಕ್ಕೆ ಆಗ್ರಹಿಸುವೆ 

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 4:59 IST
Last Updated 11 ಏಪ್ರಿಲ್ 2019, 4:59 IST
   

ಮುಜಪ್ಫರನಗರ: ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಕ್ಷೇತ್ರ ಮುಜಪ್ಫರನಗರದ ಬಿಜೆಪಿ ಅಭ್ಯರ್ಥಿ ತಮ್ಮ ಕ್ಷೇತ್ರದಲ್ಲಿ ಬುರ್ಕಾಧಾರಿಗಳಿಂದನಕಲಿ ಮತದಾನವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಬೆಳಗ್ಗೆ ಮತ ಚಲಾವಣೆ ಮಾಡಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ ಕ್ಷೇತ್ರದಲ್ಲಿ ಬುರ್ಕಾಧಾರಿ ಮಹಿಳೆಯರ ಮುಖ ಪರಿಶೀಲಿಸದೇ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ. ನಕಲಿ ಮತದಾನವಾಗುತ್ತಿದೆ ಎಂದು ನಾನು ಆರೋಪ ಮಾಡುತ್ತೇನೆ. ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸದೇ ಹೋದರೆ ಮರುಮತದಾನಕ್ಕೆ ನಾನು ಒತ್ತಾಯಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.

ಮುಜಪ್ಫರನಗರ ಕ್ಷೇತ್ರದ ಕೆಲವೆಡೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಇದರಿಂದಾಗಿ ಮತದಾನ ವಿಳಂಬವಾದ ಬಗ್ಗೆ ವರದಿಯಾಗಿದೆ. ಇಲ್ಲಿ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಅಜಿತ್‌ ಸಿಂಗ್‌ ಅವರು ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಬೆಂಬಲದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ADVERTISEMENT

2013ರಲ್ಲಿ ಇಲ್ಲಿ ಉಂಟಾಗಿದ್ದ ಕೋಮುದಳ್ಳುರಿಯಲ್ಲಿ 6 ಮಂದಿ ಮೃತಪಟ್ಟಿದ್ದರು. 50 ಸಾವಿರ ಮಂದಿ ನಿರಾಶ್ರಿತರಾಗಿದ್ದರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ್‌ ಬಲ್ಯಾನ್‌ 4 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.