ADVERTISEMENT

ಬಿಜೆಪಿ, ಆರ್‌ಎಸ್‌ಎಸ್ ಹಿಂದುತ್ವವನ್ನು ಹೈಜಾಕ್ ಮಾಡಿವೆ: ಮೆಹಬೂಬಾ ಮುಫ್ತಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 11:27 IST
Last Updated 13 ನವೆಂಬರ್ 2021, 11:27 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಜಮ್ಮು:ಸನಾತನ ಧರ್ಮವು 'ಒಳಗೊಳ್ಳುವಿಕೆ'ಯನ್ನು ಬೋಧಿಸುತ್ತದೆ ಆದರೆ, ಇದಕ್ಕೆ ಬಿಜೆಪಿಯು ಸಂಪೂರ್ಣ ವಿರುದ್ಧವಾಗಿದೆ ಎಂದುಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಮುಫ್ತಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಪ್ರಚಾರ ಮಾಡುತ್ತಿರುವುದು ಸನಾತನ ಧರ್ಮವಲ್ಲ ಎಂದು ಹೇಳಿದ್ದಾರೆ.

'ಸನಾತನ ಧರ್ಮವು ಕೋಮುವಾದವನ್ನು ಬೋಧಿಸುವುದಿಲ್ಲ. ಜನರು ಕೋಮುವಾದದ ಹೆಸರಿನಲ್ಲಿ ಕಚ್ಚಾಡುವುದನ್ನು ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಜನ ಸಂಘ ಬಯಸುತ್ತವೆ. ಅವರು ಹಿಂದೂ ಧರ್ಮ ಮತ್ತು ಹಿಂದುತ್ವವನ್ನು ಹೈಜಾಕ್ ಮಾಡಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದುತ್ವವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎಂದುಕೊಂಡಿದ್ದಾರೆ. ಆದರೆ, ಅದು ಹಾಗಲ್ಲ' ಎಂದು ಒತ್ತಿ ಹೇಳಿದ್ದಾರೆ.

ADVERTISEMENT

ಬಿಜೆಪಿ ಮತ್ತು ಆರ್‌ಎಸ್‌ಎಸ್‌, ಧರ್ಮದ ಹೆಸರಿನಲ್ಲಿ ಹಿಂಸಾಚಾರ ಮತ್ತು ಗಲಭೆಗಳನ್ನು ಸೃಷ್ಟಿಸಿದರೆ, ಧರ್ಮದ ಹೆಸರಿನಲ್ಲಿ ಮತ್ತೊಬ್ಬರನ್ನು ಕೊಲ್ಲುವವರಿಗಿಂತ ಹೇಗೆ ವಿಭಿನ್ನವೆನಿಸಿಕೊಳ್ಳುತ್ತವೆ ಎಂದೂ ಪ್ರಶ್ನಿಸಿದ್ದಾರೆ.

ಮುಂದುವರಿದು, 'ಕೋಮುವಾದಿ ಪಕ್ಷಗಳನ್ನು, ಹಿಂದೂ ಮತ್ತು ಮುಸ್ಲಿಮರನ್ನು ಧರ್ಮದ ಹೆಸರಿನಲ್ಲಿ ಹೋರಾಡುವಂತೆ ಮಾಡುವವರನ್ನು ಐಎಸ್‌ (ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ) ಅಥವಾ ಬೇರೆ ಯಾವುದೇ ಗುಂಪಿನೊಂದಿಗೆ ಹೋಲಿಸಬಹುದು. ಏಕೆಂದರೆ ಅವರೆಲ್ಲ ಧರ್ಮದ ಹೆಸರಿನಲ್ಲಿ ಜನರನ್ನು ಕೊಲ್ಲುತ್ತಾರೆ' ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.